ನವದೆಹಲಿ: ‘ಗೂಂಡಾ’ ಮತ್ತು ‘ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶ’ದಿಂದ ಎಂಬ ಪದಗಳನ್ನು ಬಳಸಿ ವ್ಯಕ್ತಿಯೊಬ್ಬನನ್ನು ಮುಂಜಾಗ್ರತೆ ಬಂಧನ ಕಾಯ್ದೆಯಡಿ ಬಂಧನದಲ್ಲಿ ಇಡುವುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಕಳಪೆ ಮೆಣಸಿನಕಾಯಿ ಬೀಜವನ್ನು ಮಾರಾಟ ಮಾಡಿದ ವ್ಯಕ್ತಿಯನ್ನು ಗೂಂಡಾ ಎಂದು ಕರೆದು ಆತನನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧನದಲ್ಲಿ ಇಟ್ಟು ಜಾಮೀನು ಪಡೆಯಲು ಅವಕಾಶ ನೀಡದ ತೆಲಂಗಾಣ ಸರ್ಕಾರದ ಕ್ರಮ ಕಾನೂನುಬಾಹಿರ ಎಂದು ನ್ಯಾಯಮೂರ್ತಿ ಎಲ್. ನಾಗೇಶ್ವರ್ ರಾವ್ ಮತ್ತು ನವಿನ್ ಸಿನ್ಹಾ ಅವರಿದ್ದ ಪೀಠವು ಹೇಳಿದೆ.
ಮಾರಾಟ ಮಾಡಿದ ಬೀಜವು ಕಳಪೆ ಎಂಬ ಕಾರಣಕ್ಕೆ ವ್ಯಕ್ತಿಗೆ ಗೂಂಡಾ ಎಂದು ಕರೆದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂಬ ಕಾರಣ ನೀಡಿ ಮುಂಜಾಗ್ರತೆ ಬಂಧನ ಕಾಯ್ದೆಯಡಿ ಬಂಧಿಸಿರುವುದು ಕಾನೂನಿನ ಉಲ್ಲಂಘನೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಬೀಜದ ವ್ಯಾಪಾರಿಯನ್ನು ಒಂದು ವರ್ಷ ಬಂಧನದಲ್ಲಿ ಇಡಬೇಕು ಎಂಬ ತೆಲಂಗಾಣ ಸರ್ಕಾರದ ಆದೇಶವನ್ನು ನ್ಯಾಯಪೀಠ ರದ್ದುಪಡಿಸಿದೆ.