ನವದೆಹಲಿ: ಸಹಾರನ್ಪುರ ಹಿಂಸಾಚಾರಕ್ಕೆ ಉತ್ತರಪ್ರದೇಶದ ಬಿಜೆಪಿ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದರು.
ಸಹಾರ್ನಪುರ ಪ್ರವೇಶಕ್ಕೆ ಜಿಲ್ಲಾ ಆಡಳಿತ ಅವಕಾಶ ನೀಡದ ಕಾರಣ ಉತ್ತರಪ್ರದೇಶ ಮತ್ತು ಹರಿಯಾಣ ಗಡಿಯ ರಸ್ತೆ ಬದಿಯ ಹೋಟೆಲ್ ವೊಂದರಲ್ಲಿ ಗಲಭೆಯ ಸಂತ್ರಸ್ತರನ್ನು ಭೇಟಿ ಮಾಡಿದ ರಾಹುಲ್, ಅಗತ್ಯವಿರುವ ಎಲ್ಲಾ ನೆರವು ನೀಡುವ ಭರವಸೆ ನೀಡಿದರು.
ರಾಹುಲ್ ಅವರು ದೊಡ್ಡ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರ ಜತೆ ಠಾಕೂರ್ ಸಮುದಾಯ ಮತ್ತು ದಲಿತರ ನಡುವೆ ಹಿಂಸಾಚಾರ ನಡೆದ ಶಬ್ಬಿರ್ಪುರ ಗ್ರಾಮಕ್ಕೆ ತೆರಳಲು ಪ್ರಯತ್ನಿಸಿದಾಗ ಪೊಲೀಸರು ತಡೆದರು.
ಇದರಿಂದ ಕುಪಿತಗೊಂಡ ಅವರು ಪೊಲೀಸ್ ಅಧಿಕಾರಿಗಳ ಜತೆ ವಾಗ್ವಾದಕ್ಕಿಳಿದರು. ‘ಯಾವ ಕಾನೂನಿನ ಪ್ರಕಾರ ನಮ್ಮನ್ನು ತಡೆಯುತ್ತಿದ್ದೀರಿ’ ಎಂದು ಪ್ರಶ್ನಿಸಿದರು.
ಗಲಭೆಪೀಡಿತ ಗ್ರಾಮಕ್ಕೆ ಯಾವ ರಾಜಕಾರಣಿಯನ್ನೂ ಬಿಡುತ್ತಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.