ಮೈಸೂರು: ಮೈಸೂರು ಭಾಗದ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಶನಿವಾರ ನಾಗಮಂಗಲ ತಾಲ್ಲೂಕು ಯತ್ತಗೋನ
ಹಳ್ಳಿಯಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮಹಿಳೆಯೊಬ್ಬರು ಕೊಚ್ಚಿ ಹೋಗಿದ್ದಾರೆ.
ಲಕ್ಷ್ಮಿ (40) ಎಂಬುವರು ಸಂಜೆ 5 ಗಂಟೆಯಲ್ಲಿ ಜಮೀನಿನಿಂದ ಮನೆಗೆ ಬರುವಾಗ ಹಳ್ಳ ದಾಟಲು ಯತ್ನಿಸಿ ಕೊಚ್ಚಿಹೋಗಿದ್ದಾರೆ. ಮೈಸೂರು, ಮಂಡ್ಯ, ಹಾಸನ, ಕೊಡಗು ಜಿಲ್ಲೆಯ ವಿವಿಧೆಡೆ ಶುಕ್ರವಾರ ರಾತ್ರಿ ಧಾರಾಕಾರ ಮಳೆಯಾಗಿದೆ.
ಚಾವಣಿ ಕುಸಿದು ಬಾಲಕಿಗೆ ಗಾಯ: ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಕೊಂಗಲಬೀಡು ಗ್ರಾಮದಲ್ಲಿ ಚಾವಣಿ ಕುಸಿದು ಮರಿಗೌಡ ಎಂಬುವರ ಪುತ್ರಿ ಸಂಜನಾಗೆ ಪೆಟ್ಟಾಗಿದೆ.
ಎಂಜಿನಿಯರ್ಗೆ ಗಾಯ: ಪಾಂಡವಪುರ ತಾಲ್ಲೂಕು ಕಟ್ಟೇರಿ ಗ್ರಾಮದಲ್ಲಿ ಸೇತುವೆ ಸೆಂಟ್ರಿಂಗ್ ಕುಸಿದು ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ ಚಂದುಕುಮಾರ್ ಗಾಯಗೊಂಡಿದ್ದಾರೆ.
****
ಸಿಡಿಲು ಬಡಿದು ವ್ಯಕ್ತಿ ಸಾವು
ನಂಗಲಿ (ಮುಳಬಾಗಿಲು ತಾ.): ಸಿಡಿಲು ಬಡಿದು ವ್ಯಕ್ತಿಯೊಬ್ಬರು ಇಲ್ಲಿಗೆ ಸಮೀಪದ ಎಸ್. ಅನಂತಪುರದಲ್ಲಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.
ಗ್ರಾಮದ ನಿವಾಸಿ ಹನುಮಪ್ಪ (55) ಮೃತ ವ್ಯಕ್ತಿ. ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದಾಗ ಗುಡುಗು ಸಹಿತ ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಿದ್ದರು. ಆಗ ಸಿಡಿಲು ಬಡಿದಿದೆ ಎನ್ನಲಾಗಿದೆ.