ಗದಗ: ‘ರಾಜ್ಯದಲ್ಲಿ ಬಗರ್ ಹುಕುಂ ಸಾಗುವಳಿದಾರರ ಎರಡು ಲಕ್ಷಕ್ಕೂ ಹೆಚ್ಚು ಅರ್ಜಿಗಳು ಶಾಸಕರ ನಿರಾಸಕ್ತಿ ಕಾರಣ ಇತ್ಯರ್ಥವಾಗದೆ ಬಾಕಿ ಉಳಿದಿವೆ’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತೀವ್ರ ಬೇಸರ ವ್ಯಕ್ತಪಡಿಸಿದರು.
ಹಕ್ಕು ಪತ್ರ ವಿತರಣೆ ಕಾರ್ಯಕ್ರಮಕ್ಕೆ ಶನಿವಾರ ಇಲ್ಲಿಗೆ ಬಂದಿದ್ದ ಅವರು, ಸುದ್ದಿಗಾರರ ಜತೆಗೆ ಮಾತನಾಡಿದರು.
‘ಬಗರ್ ಹುಕುಂ ಸಾಗುವಳಿದಾರರ ಬಾಕಿ ಉಳಿದಿರುವ ಅರ್ಜಿಗಳನ್ನು ನಾಲ್ಕು ತಿಂಗಳ ಒಳಗಾಗಿ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಶಾಸಕರಿಗೂ ಈ ಕುರಿತು ಮನವರಿಕೆ ಮಾಡಿಕೊಡಲಾಗಿದೆ’ ಎಂದರು.
‘ಭೂಸುಧಾರಣೆ ಕಾಯ್ದೆಯು ರಾಷ್ಟ್ರಪತಿ ಅವರ ವ್ಯಾಪ್ತಿಗೆ ಬರುವುದಾಗಿ ಅಡ್ವೊಕೇಟ್ ಜನರಲ್ ಸಲಹೆ ನೀಡಿದ್ದಾರೆ. ಹೀಗಾಗಿ ಮಸೂದೆಯನ್ನು ಮುಂದಿನ ಕ್ರಮಕ್ಕಾಗಿ ಅವರಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ವಿರಾಜಪೇಟೆ ತಾಲ್ಲೂಕಿನ ದಿಡ್ಡಳ್ಳಿ ನಿವಾಸಿಗಳು ವಾಸವಿದ್ದ ಸ್ಥಳದಲ್ಲೇ ನಿವೇಶನ, ಮನೆ, ಜಮೀನು ಹಂಚಿಕೆ ಮಾಡುವ ಪ್ರಕ್ರಿಯೆ ನಡೆದಿದೆ’ ಎಂದರು.