ಮಂಗಳೂರು: ತನ್ವಿ ಜಗದೀಶ್ ಅವರು ಸಸಿಹಿತ್ಲು ಬೀಚ್ನಲ್ಲಿ ಶನಿವಾರ ನಡೆದ ‘ಇಂಡಿಯನ್ ಓಪನ್ ಆಫ್ ಸರ್ಫಿಂಗ್’ ಚಾಂಪಿಯನ್ಷಿಪ್ನ ಮಹಿಳೆಯರ ಮುಕ್ತ ವಿಭಾಗದಲ್ಲಿ ನಡೆದ ಸರ್ಫಿಂಗ್ನ ಆರಂಭಿಕ ಹೀಟ್ಸ್ನಲ್ಲಿ ಪ್ರಥಮ ಸ್ಥಾನ ಪಡೆದ ಸೆಮಿಫೈನಲ್ಗೆ ಪ್ರವೇಶ ಪಡೆದುಕೊಂಡರು.
ಹರ್ಷಿತಾ ಆಚಾರ್ ಎರಡನೇ ಹಾಗೂ ವಿಲಾಸಿನಿ ಸುಂದರ್ ಮೂರನೇ ಸ್ಥಾನ ಗಳಿಸಿದರು. ಒಟ್ಟು 20 ನಿಮಿಷಗಳಲ್ಲಿ 20 ಅಲೆಗಳನ್ನು ತನ್ವಿ ಜಗದೀಶ್ ಸಮರ್ಥವಾಗಿ ಎದುರಿಸಿದರು.
ಕೆನರಾ ಸರ್ಫಿಂಗ್ ಅಂಡ್ ವಾಟರ್ ಸ್ಪೋರ್ಟ್ಸ್ ಪ್ರಮೋಷನ್ ಕೌನ್ಸಿಲ್ ಹಾಗೂ ಮಂತ್ರ ಸರ್ಫಿಂಗ್ ಕ್ಲಬ್ ಸಹಯೋಗದಲ್ಲಿ ಇಲ್ಲಿ ನಡೆಯುತ್ತಿರುವ ಸ್ಪರ್ಧೆಯ ಮೂರು ಮತ್ತು ನಾಲ್ಕನೇ ಹೀಟ್ಸ್ನಲ್ಲಿ ಹಾಲಿ ಚಾಂಪಿಯನ್ ಸಿಂಚನಾ ಗೌಡ ಹಾಗೂ ಅನೀಶಾ ನಾಯಕ್ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ.
ಮಹಿಳೆಯರ ಮುಕ್ತ ವಿಭಾಗದಲ್ಲಿ ಭಾರತೀಯ ಸರ್ಫರ್ಗಳ ನಡುವೆಯೇ ತೀವ್ರ ಸ್ಪರ್ಧೆ ಏರ್ಪಡುವುದು ಖಚಿತ. ಚೆನ್ನೈನ ವಿಲಾಸಿನಿ ಸುಂದರ್ ಹಾಗೂ ಸೃಷ್ಟಿ ಸೆಲ್ವಂ, ಪುದುಚೇರಿಯ ಸುಹಾಸಿನಿ ಡಾಮಿನ್, ಮಣಿಪಾಲದ ಇಶಿತಾ ಮಾಳವೀಯ ಮತ್ತು ರಷ್ಯಾದ ಓಲ್ಗಾ ಕೊಸೆಂಕೊ ಅವರು ಸೆಮಿಫೈನಲ್ ತಲುಪಿದ್ದಾರೆ.
ತಮಿಳುನಾಡಿನ ಧರಣಿ ಸೆಲ್ವಕುಮಾರ್ – ಪ್ರಜಾವಾಣಿ ಚಿತ್ರ /ಗೋವಿಂದರಾಜ ಜವಳಿ|
ಪುರುಷರ ವಿಭಾಗದಲ್ಲಿ (22 ರಿಂದ 30 ವರ್ಷ) ತಮಿಳುನಾಡಿನ ಹೆಚ್ಚು ಸ್ಪರ್ಧಿಗಳು ಸೆಮಿಫೈನಲ್ಗೆ ಅರ್ಹತೆ ಪಡೆದರು. ಎಂಟು ಮಂದಿಯ ಪೈಕಿ ಆರು ಮಂದಿ ತಮಿಳುನಾಡಿನವರು. ಚೆನ್ನೈನ ಶೇಖರ್ ಪಿಟ್ಚೆ , ಧರಣಿ ಸೆಲ್ವಕುಮಾರ್, ಮಣಿಕಂಠನ್, ಅಪ್ಪು ದೇಸಪ್ಪನ್, ವಿಘ್ನೇಶ್ ವಿಜಯಕುಮಾರ್ ಮತ್ತು ಸಂತೋಷ ಮೂರ್ತಿ ಹಾಗೂ ರಾಹುಲ್ ಪನ್ನೀರ್ ಸೆಲ್ವಂ, ಗೋವಾದ ಸ್ವಪ್ನಿನ್ ಭಿಂಹೆ ಹಾಗೂ ಕೇರಳದ ವರ್ಗೀಸ್ ಆಂಟೊನಿ ಆಯ್ಕೆ ಆಗಿದ್ದಾರೆ.
16 ವರ್ಷ ವಯೋಮಿತಿಯ ವಿಭಾಗದಲ್ಲಿ ತಮಿಳುನಾಡಿನ ಸ್ಪರ್ಧಿಗಳೇ ಮುಂದೆ: ತಮಿಳುನಾಡಿನ ಸಂತೋಷ್ ಶಾಂತ ಕುಮಾರ್, ಎಂ.ಮಣಿಕಂಠನ್, ಅಜೀಶ್ ಅಲಿ ಹಾಗೂ ಐ.ಮಣಿಕಂಠನ್, ಮಹಾ ಬಲಿಪುರದ ಸುನೀಲ್ ದಯಾಳನ್, ಶಿವ ರಾಜ್ ಬಾಬು ಸೆಮಿಫೈನಲ್ ಪ್ರವೇಶಿಸಿದ್ದಾರೆ.
‘ವಾಕ್ಇನ್ ಆನ್ ವಾಟರ್ ಮಂಗ ಳೂರು ಕ್ಲಬ್’ ಬೀಚ್ನಲ್ಲಿ ವ್ಯಾಪಾರ ಮಾಡುವ ತಮಿಳುನಾಡು ಹಾಗೂ ಉತ್ತರ ಕರ್ನಾಟಕದ ಮಕ್ಕಳಿಗೆ ಸರ್ಫಿಂಗ್ ತರಬೇತಿ ನೀಡಿತು. ಒಟ್ಟು 5 ಮಕ್ಕಳು ಸೆಮಿಫೈನಲ್ಗೆ ಅರ್ಹತೆ ಪಡೆದಿ ದ್ದಾರೆ. 14 ವರ್ಷ ವಯೋಮಿತಿಯ ವಿಭಾಗದಲ್ಲಿ ಸುಬ್ರಮಣಿ, ಮಂಜುನಾಥ, 16 ವರ್ಷ ವಯೋಮಿತಿಯ ವಿಭಾಗದಲ್ಲಿ ಚಂದ್ರು, ಸೆಲ್ವಕುಮಾರ್, ಪ್ರವೀಣ್ ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.