ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ವಿದ್ಯುತ್ ಕಡಿತ ಸಮಸ್ಯೆ ವ್ಯಾಪಕವಾಗಿತ್ತು. ಪ್ರತಿ ಸಲ ಜೋರು ಮಳೆ ಸುರಿದಾಗಲೂ ಕನಿಷ್ಠ 5,000 ದೂರುಗಳು ಬರುತ್ತಿದ್ದವು. ವಿದ್ಯುತ್ ವ್ಯವಸ್ಥೆಯನ್ನು ಸಹಜ ಸ್ಥಿತಿಗೆ ತರಲು ಏಳೆಂಟು ಗಂಟೆ ಬೇಕಾಗುತ್ತಿತ್ತು. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಂಪೆನಿ ಯೋಜಿಸಿದೆ.
ಮಹಾನಗರ ವ್ಯಾಪ್ತಿಯಲ್ಲಿ ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ವಿಭಾಗಗಳು ಇವೆ. ಮುಂದಿನ ದಿನಗಳಲ್ಲಿ ಪಶ್ಚಿಮ– ದಕ್ಷಿಣ ವಲಯ ಹಾಗೂ ಉತ್ತರ– ಪೂರ್ವ ವಲಯಗಳು ಇರಲಿವೆ.
‘ಮಹಾನಗರ ವ್ಯಾಪ್ತಿಯಲ್ಲಿ ಐಟಿ–ಬಿಟಿ ಕಂಪೆನಿಗಳು, ರಿಯಲ್ ಎಸ್ಟೇಟ್ ಕಂಪೆನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಇವುಗಳಿಗೆ ನಿರಂತರ ವಿದ್ಯುತ್ ಪೂರೈಕೆ ಸವಾಲಿನ ಕೆಲಸವಾಗಿದೆ. ಅದರಲ್ಲೂ ಮಳೆ ಅನಾಹುತ ಸಂದರ್ಭದಲ್ಲಿ ದುರಸ್ತಿ ಕಾರ್ಯಕ್ಕೆ ಹೆಚ್ಚಿನ ಸಮಯಾವಕಾಶ ಹಿಡಿಯುತ್ತಿತ್ತು. ವಲಯಗಳ ಮರುವಿಂಗಡಣೆ ಮಾಡಿದರೆ ತ್ವರಿತಗತಿಯಲ್ಲಿ ದೂರುಗಳ ವಿಲೇವಾರಿ ಮಾಡಬಹುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.