ಬೆಂಗಳೂರು: ನಮ್ಮ ಮೆಟ್ರೊ ಉತ್ತರ–ದಕ್ಷಿಣ ಕಾರಿಡಾರ್ನ ಯಲಚೇನಹಳ್ಳಿ– ಸಂಪಿಗೆ ರಸ್ತೆ ಮಾರ್ಗದ ಸುರಕ್ಷತಾ ತಪಾಸಣೆ ನಡೆಯುವುದರಿಂದ ಮೇ 29ರಿಂದ 31ರವರೆಗೆ ರಾಜಾಜಿನಗರ– ಸಂಪಿಗೆರಸ್ತೆ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರ ಸ್ಥಗಿತಗೊಳ್ಳಲಿದೆ.
ಮೆಟ್ರೊ ರೈಲು ಸುರಕ್ಷತಾ ಆಯುಕ್ತ ಕೆ.ಎ.ಮನೋಹರನ್ ಅವರು ಯೆಲಚೇನಹಳ್ಳಿ– ಸಂಪಿಗೆ ರಸ್ತೆ ಮಾರ್ಗದ ತಪಾಸಣೆ ನಡೆಸಲಿದ್ದಾರೆ. ಈ 3 ದಿನಗಳಲ್ಲಿ ಶ್ರೀರಾಂಪುರ, ಕುವೆಂಪು ರಸ್ತೆ ಹಾಗೂ ಸಂಪಿಗೆ ರಸ್ತೆ ನಿಲ್ದಾಣಗಳಲ್ಲಿ ಮಾತ್ರ ಮೆಟ್ರೊ ಸೇವೆ ಇರುವುದಿಲ್ಲ.
ಆದರೆ, ನಾಗಸಂದ್ರ ನಿಲ್ದಾಣದಿಂದ ರಾಜಾಜಿನಗರ ನಿಲ್ದಾಣದವರೆಗೆ ಎಂದಿನಂತೆ ಸೇವೆ ಮುಂದುವರಿಯಲಿದೆ. ರಾಜಾಜಿನಗರ ಮೆಟ್ರೊ ನಿಲ್ದಾಣದಿಂದ ಮೆಜೆಸ್ಟಿಕ್ ಕೆಂಪೇಗೌಡ ನಿಲ್ದಾಣದವರೆಗೆ ಸಂಪರ್ಕ ಸಾರಿಗೆ ವ್ಯವಸ್ಥೆ ಒದಗಿಸಲಾಗುತ್ತದೆ ಎಂದು ಮೆಟ್ರೊ ರೈಲು ನಿಗಮ ತಿಳಿಸಿದೆ.