ಗುಬ್ಬಿ: ‘ಪ್ರಾದೇಶಿಕ ಅರಣ್ಯ ಇಲಾಖೆವತಿಯಿಂದ ಸಾಕಷ್ಟು ಸಸಿಗಳನ್ನು ಬೆಳೆಸಲಾಗಿದ್ದು, ರೈತರು, ಸಾರ್ವಜನಿಕರು ಮರಗಳನ್ನು ಬೆಳೆಸಲು ಸಹಕರಿಸಬೇಕು’ ಎಂದು ವಲಯ ಅರಣ್ಯಾಧಿಕಾರಿ ರಮೇಶ್ ತಿಳಿಸಿದರು.
ತಾಲ್ಲೂಕಿನ ಜಿ.ಹೊಸಹಳ್ಳಿಯ ‘ಸಸ್ಯಕ್ಷೇತ್ರ’ದಲ್ಲಿ ಬುಧವಾರ ಸಸಿಗಳ ಬೆಳವಣಿಗೆ, ನಿರ್ವಹಣೆಯನ್ನು ವೀಕ್ಷಿಸಿ ಅವರು ಮಾಹಿತಿ ನೀಡಿದರು. ‘ಕೆಶಿಪ್ ನಿಂದ ನಿರ್ಮಿತವಾಗುತ್ತಿರುವ ಗುಬ್ಬಿ-ಸಿ.ಎಸ್.ಪುರ ರಸ್ತೆ ಬದಿ ಸಾಲು ಮರಗಳನ್ನು ನೆಡಲು ಕ್ರಮ ಕೈಗೊಳ್ಳಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ರಕ್ಷಣಾ ಬೇಲಿ ವ್ಯವಸ್ಥೆ ಇದ್ದಲ್ಲಿ ನಮ್ಮ ಇಲಾಖೆಯಿಂದಲೇ ಸಸಿಗಳನ್ನು ಬೆಳೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ಪ್ರತಿಮನೆ ಮುಂದೆ ಒಂದೊಂದು ಸಸಿಗಳನ್ನು ನೆಡಲು ಪ್ರತಿಯೊಬ್ಬರು ಮನಸ್ಸು ಮಾಡಬೇಕು. ಈ ಬೇಸಿಗೆ ನಮ್ಮ ಮೇಲೆ ಮುನಿಸು ತೋರಿತ್ತು. ನಾವು ಸಸಿಗಳನ್ನು ನೀಡುತ್ತೇವೆ. ತಮ್ಮ ಜಮೀನುಗಳಲ್ಲಿ ಅರಣ್ಯ ಕೃಷಿ ನಡೆಸಬಹುದು. ಇದಕ್ಕೆ ಇಲಾಖೆ ಪ್ರೋತ್ಸಾಹ ಧನ ನೀಡಲಿದೆ’ ಎಂದರು.
‘ಅರಣ್ಯ ಬೆಳೆಸಲು ಸಾಕಷ್ಟು ಸಸಿಗಳು ಲಭ್ಯವಿದ್ದು, ಸ್ವಯಂಸೇವಾ ಸಂಸ್ಥೆಗಳು, ಯುವಕ ಸಂಘಟನೆಗಳು ಮುಂದೆ ಬಂದಲ್ಲಿ ಸಸಿಗಳನ್ನು ಬೆಳೆಸುವ ಬಗ್ಗೆ ಇಲಾಖೆಯಲ್ಲಿ ಅಗತ್ಯ ಮಾಹಿತಿ ನೀಡಲಾಗುವುದು’ ಎಂದರು. ಸಲಾರ್ ಅಹಮದ್, ರಘು, ಕರಿಯಪ್ಪ, ರಂಗೇಗೌಡ ಇದ್ದರು.
* *
ಎಲ್ಲ ನಮೂನೆಯ ಸಸಿಗಳನ್ನು ನಮ್ಮಲ್ಲಿ ಬೆಳೆಸಲಾಗಿದೆ. ತಮ್ಮಿಷ್ಟದ ಗಿಡಗಳನ್ನು ಜಮೀನುಗಳಲ್ಲಿ ಬೆಳೆಸುವ ಮೂಲಕ ರೈತರು ಆದಾಯ ಹೆಚ್ಚಿಸಿಕೊಳ್ಳಬಹುದು. ಸಲಾರ್ ಅಹಮದ್
ಸಹ ವಲಯ ಅರಣ್ಯಾಧಿಕಾರಿ