ಕೆಜಿಎಫ್: ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಬಿದ್ದ ಭಾರಿ ಮಳೆಯಿಂದಾಗಿ ಬಹುತೇಕ ಕುಂಟೆಗಳು ಮತ್ತು ಸಣ್ಣ ಕೆರೆಗಳು ತುಂಬಿದ್ದು, ರೈತರಲ್ಲಿ ಹರ್ಷವನ್ನುಂಟು ಮಾಡಿದೆ.
ಕಳೆದ ಒಂದು ವಾರದಿಂದ ಮಳೆ ಆಗಾಗ್ಗೆ ಬೀಳುತ್ತಿದ್ದು, ಭೂಮಿ ಸ್ವಲ್ಪ ಒದ್ದೆಯಾಗಿತ್ತು. ಹಲವು ವರ್ಷಗಳ ನಂತರ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದೆ. ಮುಂಗಾರು ಶುರುವಾಗುವ ಮುನ್ನವೇ ಮಳೆ ಬಿದ್ದಿದ್ದೂ ಅಪರೂಪ. ಮುಂದಿನ ಮಳೆಗಳಲ್ಲಿ ದೊಡ್ಡ ಕೆರೆಗಳೂ ಭರ್ತಿಯಾಗುವ ನಂಬಿಕೆ ರೈತರದ್ದು.
ನಲ್ಲೂರು ಬಳಿಯ ಏಟಿಯಿಂದ ಕೊಳವೆಗಳ ಮೂಲಕ ಕೋಡಿ ನೀರು ಹರಿದು ಬರುತ್ತಿದೆ. ಸಂಪೂರ್ಣ ಬತ್ತಿರುವ ಬೇತಮಂಗಲ ಜಲಾಶಯಕ್ಕೆ ನೀರು ಹರಿದುಬರುತ್ತಿರುವುದನ್ನು ನೋಡಲು ನೂರಾರು ಮಂದಿ ಏಟಿ ಬಳಿ ಬರುತ್ತಿದ್ದಾರೆ. ಕೆಜಿಎಫ್ ನಗರಕ್ಕೆ ಇದೇ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.
ಚಿಗರಾಪುರದ ಕೆರೆ ರಾತ್ರಿಯೇ ಕೋಡಿ ಬಿದ್ದಿದೆ. ಅದೇ ರೀತಿ ಹಲವು ಸಣ್ಣಪುಟ್ಟ ಕೆರೆಗಳು ಸಹ ಕೋಡಿ ಹೋಗಿವೆ. ಕಗ್ಗಿಲಹಳ್ಳಿಯ ಪ್ರಗತಿಪರ ರೈತ ಮುನಿಯಪ್ಪ ಅವರ ಪಾಲಿಹೌಸ್ ರಾತ್ರಿ ಬಿದ್ದ ಭಾರಿ ಮಳೆ ಮತ್ತು ಬಿರುಗಾಳಿಗೆ ನೆಲ ಕಚ್ಚಿದೆ. ಅದರ ಕಬ್ಬಿಣದ ಶೀಟ್ಗಳು ಸುಮಾರು ಮೂನ್ನೂರು ಅಡಿ ದೂರದ ವರೆಗೆ ಹಾರಿ ಹೋಗಿವೆ. ಇದರಿಂದ ಸುಮಾರು ₹ 3 ಲಕ್ಷ ನಷ್ಟ ಸಂಭವಿಸಿದೆ