ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಶವಾಗದ ದೇವರ ಬಿದಿರು..!

Last Updated 28 ಮೇ 2017, 6:27 IST
ಅಕ್ಷರ ಗಾತ್ರ

ವಿರಾಜಪೇಟೆ: ‘ಕುಂದತ ಬೊಟ್ಟ್‌ಲ್ ನೇಂದ ಕುದುರೆ ಪಾರಾಣ ಮಾನಿಲ್ ಅಳ್ಂಜ ಕುದುರೆ’ ಎಂಬ ನಾಣ್ನುಡಿಯ ವಿಶಿಷ್ಟ ಮಾದರಿಯ ಬೇರಳಿನಾಡಿನ ಪಾರಣ ಬೇಡುಹಬ್ಬದ ದೊಡ್ಡಹಬ್ಬ  ಮೇ 31 ಹಾಗೂ ಜೂನ್‌ 1ರಂದು ಎರಡು ದಿನಗಳ ಕಾಲ ನಡೆಯಲಿದೆ. ಪಾರಣ ಬೇಡುಹಬ್ಬವು ಜಿಲ್ಲೆಯ ಬೇಡುಹಬ್ಬಗಳ ಪೈಕಿ ಕೊನೆಯ ಹಬ್ಬವಾಗಿದೆ.

31ರಂದು ಪದ್ಧತಿಯಂತೆ ಕಂಡಂಗಾಲ, ಪೊದಕೇರಿ, ವಿ. ಬಾಡಗ ಹಾಗೂ ಮರೋಡಿ ಗ್ರಾಮದ ಅಂಬಲದಲ್ಲಿ ವೇಷಧಾರಿಗಳು ವಿವಿಧ ವೇಷ ಧರಿಸುತ್ತಾರೆ.ಬಳಿಕ ರಾತ್ರಿಯಿಂದಲೇ ವೇಷಧಾರಿಗಳು ನಾಡಿನ ಮನೆಮನೆಗೆ ತೆರಳಿ 1ರಂದು ಬಿದಿರಿನ ಕುದುರೆ ಹಾಗೂ ಆನೆಯನ್ನು ಶೃಂಗರಿಸಿ ಮೆರವಣಿಗೆಯೊಂದಿಗೆ ಪಾರಣ ಮಾನಿಗೆ ತೆರಳಿ ಹಬ್ಬಕ್ಕೆ ವಿದಾಯ ಹೇಳುವುದು ಇಲ್ಲಿನ ವಾಡಿಕೆ.ಸಾಮಾನ್ಯವಾಗಿ ಮಹಿಳೆಯರ ವೇಷ, ವಡ್ಡರ ವೇಷ ಇತ್ಯಾದಿ ವೇಷದಲ್ಲಿ ಸಂಭ್ರಮಿಸುತ್ತಾರೆ.

ಹಿನ್ನೆಲೆ:  ಪುರಾತನ ಕಾಲದಲ್ಲಿ ಬೇರಳಿನಾಡಿನಲ್ಲಿದ ಭಸ್ಮಾಸುರನೆಂಬ ರಾಕ್ಷಸ ಈಶ್ವರನನ್ನು ಘೋರ ತಪಸ್ಸಿನ ಮೂಲಕ ಒಲಿಸಿಕೊಂಡು ತಾನು ತಲೆಯ ಮೇಲೆ ಕೈಯಿಡುವ ಎಲ್ಲಾ ಮನುಷ್ಯರು ಭಸ್ಮವಾಗುವ ವರವನ್ನು ಸಂಪಾದಿಸಿಕೊಳ್ಳುತ್ತಾನೆ.

ಪ್ರಯೋಗಾರ್ಥವಾಗಿ ವರ ನೀಡಿದ ಈಶ್ವರನ ತಲೆಯ ಮೇಲೆ ಕೈಇಡಲು ಭಸ್ಮಾಸುರನು ಮುಂದಾಗುತ್ತಾನೆ. ಆಗ ಭಸ್ಮಾಸುರನಿಂದ ರಕ್ಷಿಸಿಕೊಳ್ಳಲು ಈಶ್ವರನು ವಿಷ್ಣು ದೇವರನ್ನು  ಪ್ರಾರ್ಥಿಸುತ್ತಾನೆ. ಪ್ರತ್ಯಕ್ಷನಾದ ಮಹಾವಿಷ್ಣು ಕೊಟ್ಟ ವರ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ಕುದುರೆ ಹಾಗೂ ಆನೆಗಳ ಯಾಗವನ್ನು ನಡೆಸಿ ಆಹುತಿ ನೀಡುವ ಮೂಲಕ ಭಸ್ಮಾಸುರನನ್ನು ಸಂಹರಿಸಬಹುದೆಂದು ಈಶ್ವರನಿಗೆ ಸಲಹೆ ನೀಡುತ್ತಾನೆ.

ಈ ಪ್ರತೀತಿಯಂತೆ ಬೇರಳಿನಾಡಿನ ಜನ ಇಂದಿಗೂ ಪ್ರತಿ ವರ್ವವೂ ಈ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.  ಶೃಂಗರಿಸಿದ ಕುದುರೆ, ಆನೆಗಳ ಪ್ರತಿರೂಪಗಳೊಂದಿಗೆ ವಿವಿಧ ವೇಷಧರಿಸಿ ಪಾರಣಮಾನಿ ಎಂಬಲ್ಲಿ ಭಸ್ಮಾಸುರನನ್ನು ಕೊಲ್ಲುವ ಮೂಲಕ ಕುದುರೆ ಹಾಗೂ ಆನೆಯ ಪ್ರತಿ ರೂಪವನ್ನು ಸಾಂಕೇತಿಕವಾಗಿ ಆಹುತಿ ನೀಡುತ್ತಾರೆ.

ವಿ. ಬಾಡಗದ ಕೋಲತಂಡ, ಪೊದಕೇರಿಯ ಕಂಜಿತಂಡ, ಕಂಡಂಗಾಲದ ಮೂಕಚಂಡ ಐನ್‌ಮನೆಯಿಂದ ಕುದುರೆ, ಪೆಗ್ಗರಿಮಾಡಿನ ಕೋಲತಂಡ ಹಾಗೂ ಮರೋಡಿಯ ಕಮ್ಮರಟಪ್ಪ ಅಂಬಲ ಆನೆ ಹಾಗೂ ಈ ನಾಡಿನ ವಿವಿಧ ವೇಷಧಾರಿಗಳು ಬಂದು ರುದ್ರಗುಪ್ಪೆಯ ಪಾರಣ ಮಾನಿಗೆ ಬಂದು ಆನೆ, ಕುದುರೆಗಳ ಪ್ರತಿರೂಪುಗಳನ್ನು ಕಡಿದು ದೇವರಿಗೆ ಆಹುತಿ ಕೊಡುವ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ.

ಜಿಲ್ಲೆಯಲ್ಲಿ ನಡೆಯುವ ಇತರ ಬೇಡು ಹಬ್ಬಗಳಂತೆ ಇಲ್ಲಿ ಬಿದಿರಿನ ಕುದುರೆ ಹಾಗೂ ಆನೆಯನ್ನು ಉತ್ಸವದ ನಂತರಪ ವಾಪಸ್‌ ಮನೆಗೆ ತಂದು ರಕ್ಷಿಸಲಾಗುವುದಿಲ್ಲ. ಬದಲಾಗಿ ನಾಡಿನ 5 ನಿಗದಿತ ಸ್ಥಳಗಳಿಂದ ಶೃಂಗಾರಗೊಂಡು ಪಾರಣ ಮಾನಿಗೆ ತೆರಳಿ ಉತ್ಸವ ಕಳೆದ ನಂತರ ಸಾಯಂಕಾಲ ಕುದುರೆ ಹಾಗೂ ಆನೆಯನ್ನು ಕಡಿದು ದೇವರಿಗೆ ಆಹುತಿ ಕೊಡಲಾಗುವುದು.

ಕುದುರೆ ಪುಂಡ:  ದೇವರ ಕುದುರೆ ಹಾಗೂ ಆನೆಯನ್ನು ತಯಾರಿಸಲು ವಿ. ಬಾಡಗ ಕಮ್ಮರಟಪ್ಪ ಅಂಬಲದ ಪಕ್ಕದಲ್ಲಿರುವ ಕುದುರೆ ಪುಂಡ(ದೇವರ ಬಿದಿರು) ಗುಡ್ಡೆಯಿಂದ ತಲಾ 1ರಂತೆ 5 ಬಿದಿರನ್ನು ಕಡಿದು ಕುದುರೆ ಹಾಗೂ ಆನೆಗಳನ್ನು ತಯಾರಿಸಲಾಗುತ್ತದೆ.

ಬಿದಿರನ್ನು ನಂತರದ ದಿನದಲ್ಲಿ ಬಳಸುವುದಿಲ್ಲ. ಪ್ರಕೃತಿಯ ಅಸಮತೋಲನ ನಿಯಮದಂತೆ 40 ವರ್ಷಕ್ಕೊಮ್ಮೆ ಕೊಡಗಿನಾದ್ಯಂತ ಬಿದಿರು ಹೂವು ಬಿಟ್ಟು ನಾಶವಾಗುತ್ತದೆ.
ಆದರೆ, ಈ ದೇವರ ಬಿದಿರು ಯಾವುದೇ ಕಾರಣಕ್ಕೂ ನಾಶವಾಗುವುದಿಲ್ಲ, ದೇವರಿದ್ದಾರೆ ಎಂಬುವುದಕ್ಕೆ ಈ ಬಿದಿರು ಸಾಕ್ಷಿಯಾಗಿದೆ ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT