ಕೊಲಂಬೊ: ಧಾರಾಕಾರ ಮಳೆಯಿಂದ ಶ್ರೀಲಂಕಾದಲ್ಲಿ ಉಂಟಾಗಿರುವ ಪ್ರವಾಹ ಮತ್ತು ಭೂ ಕುಸಿತದಿಂದ ಮೃತರಾದವರ ಸಂಖ್ಯೆ ಭಾನುವಾರ 151ಕ್ಕೆ ಏರಿಕೆಯಾಗಿದೆ.
ಪ್ರವಾಹದ ಹರಿವು ಕಡಿಮೆಯಾದ ನಂತರ ಭದ್ರತಾ ಪಡೆ ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.
15 ಜಿಲ್ಲೆಗಳಲ್ಲಿನ ಸುಮಾರು 4.42 ಲಕ್ಷ ಜನ ಪ್ರವಾಹದಿಂದ ತೊಂದರೆಗೆ ಈಡಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ. 112 ಮಂದಿ ಕಾಣೆಯಾಗಿದ್ದು, 25 ಸಾವಿರ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಮಳೆ ತಾತ್ಕಾಲಿಕವಾಗಿ ನಿಂತಿದೆ, ಆದರೆ ಮೇ 29ರಿಂದ ನೈರುತ್ಯ ಭಾಗದಲ್ಲಿ ಅಧಿಕ ಮಳೆ ಬರುವ ಸಾಧ್ಯತೆ ದಟ್ಟವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸಮುದ್ರದ ಕಡೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ವಿಶ್ವಸಂಸ್ಥೆ ಹಾಗೂ ನೆರೆಹೊರೆಯ ರಾಷ್ಟ್ರಗಳ ನೆರವಿಗೆ ವಿದೇಶಾಂಗ ಸಚಿವರು ಕೋರಿದ್ದಾರೆ. ಭಾರತ ಈಗಾಗಲೇ ನೆರವಿನ ಸಾಮಗ್ರಿಗಳನ್ನು ಕಳುಹಿಸಿದೆ.