ಮರಾವಿ (ಫಿಲಿಪ್ಪೀನ್ಸ್): ಸೇನೆ ಮತ್ತು ಇಸ್ಲಾಂ ಬಂಡುಕೋರರ ನಡುವೆ ಕಳೆದ ಆರು ದಿನಗಳಿಂದ ಇಲ್ಲಿ ನಡೆಯುತ್ತಿರುವ ಕದನದ ಪರಿಣಾಮವಾಗಿ, ಬಹುತೇಕ ನಾಗರಿಕರು ನಗರವನ್ನು ತ್ಯಜಿಸಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಮಂದಿ ಸಂಘರ್ಷದ ನಡುವೆ ಸಿಲುಕಿಕೊಂಡಿದ್ದಾರೆ.
‘ಸಂತ್ರಸ್ತ ನಾಗರಿಕರು ರಕ್ಷಣೆಗಾಗಿ ಸಹಾಯವಾಣಿಗೆ ಮನವಿ ಮಾಡುತ್ತಿದ್ದಾರೆ. ಆದರೆ ಆ ಪ್ರದೇಶಕ್ಕೆ ನಾವು ಸುಲಭವಾಗಿ ತಲುಪಲು ಸಾಧ್ಯವಾಗುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಉಗ್ರರು ಶರಣಾಗದೆ, ಮನೆ ಮತ್ತು ಸರ್ಕಾರಿ ಕಟ್ಟಡಗಳಲ್ಲಿ ಅಡಗಿರುವುದರಿಂದ ನಿರ್ದಿಷ್ಟ ವಾಯುದಾಳಿ ನಡೆಸುವುದು ಸೇನೆಗೆ ಅನಿವಾರ್ಯವಾಗಿದೆ’ ಎಂದು ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ರೆಸ್ಟಿಟ್ಯುಟೊ ಪೆಡಿಲಾ ಹೇಳಿದ್ದಾರೆ.
ಸಾವಿನ ಸಂಖ್ಯೆ 100ಕ್ಕೆ ಏರಿಕೆ: ಈ ಕದನದಲ್ಲಿ ಈವರೆಗೆ ಬಲಿಯಾದ ನಾಗರಿಕರ ಸಂಖ್ಯೆ 100ಕ್ಕೆ ಏರಿದೆ.
**
‘ಸುಪ್ರೀಂ’ ಮಾತಿಗೆ ಕಿವಿಗೊಡುವುದಿಲ್ಲ
ಜೋಲೋ: ಸಂಘರ್ಷಕ್ಕೆ ಸಿಲುಕಿರುವ ಪ್ರದೇಶದಲ್ಲಿ ಸೇನಾ ಆಡಳಿತ ಘೋಷಿಸಿರುವ ತಮ್ಮ ಕ್ರಮವನ್ನು ಅಧ್ಯಕ್ಷ ರೋಡ್ರಿಗೊ ದುತೇರ್ತೆ ಸಮರ್ಥಿಸಿಕೊಂಡಿದ್ದಾರೆ.
ತಮ್ಮ ಈ ಕ್ರಮಕ್ಕೆ ಸುಪ್ರೀಂ ಕೋರ್ಟ್ ಮತ್ತು ಸಂಸತ್ತು ವ್ಯಕ್ತಪಡಿಸಿರುವ ಆಕ್ಷೇಪಕ್ಕೆ ಕಿವಿಗೊಡುವುದಿಲ್ಲ. ಫಿಲಿಪ್ಪೀನ್ಸ್ ಸುರಕ್ಷಿತವಾಗಿದೆ ಎಂದು ಸೇನೆ ಮತ್ತು ಪೊಲೀಸರು ಹೇಳುವವರೆಗೂ ಸೇನಾ ಆಡಳಿತ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಸೇನಾ ಆಡಳಿತದ ಅವಧಿಯಲ್ಲಿ, ಪೂರ್ವಾನುಮತಿ ಇಲ್ಲದೆ ಯಾರನ್ನಾದರೂ ಬಂಧಿಸುವ ಮತ್ತು ಮನೆಗಳಿಗೆ ನುಗ್ಗಿ ಶೋಧ ನಡೆಸುವ ಅಧಿಕಾರವನ್ನು ಅವರು ಸೈನಿಕರಿಗೆ ನೀಡಿದ್ದಾರೆ.