ಮೈಸೂರು: ಗ್ರಾಮಾಂತರ ಬುದ್ಧಿಜೀವಿಗಳ ಬಳಗವು 32ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ಡಾ.ಶಿವರಾತ್ರಿ ರಾಜೇಂದ್ರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ವಿಶ್ವಕವಿ ಕುವೆಂಪು ನೆನಪಿನ ರಾಜ್ಯಮಟ್ಟದ ಸಾಹಿತ್ಯೋತ್ಸವ’ದಲ್ಲಿ 10 ಕೃತಿಗಳ ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕವಯತ್ರಿ ಡಾ.ಲತಾ ರಾಜಶೇಖರ್, ‘ಕುವೆಂಪು ತಮ್ಮ ಕೃತಿಗಳಲ್ಲಿ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದ್ದಾರೆ. ಮೌಢ್ಯವನ್ನು ಅವರು ಕೃತಿಗಳ ಮೂಲಕ ಖಂಡಿಸುತ್ತಿದ್ದರು. ವಿಜ್ಞಾನದ ದೀವಿಗೆಯಿಂದ ಮೌಢ್ಯ ದೂರ ಮಾಡಬಹುದು ಎಂದು ಅವರು ತಿಳಿಸಿದ್ದಾರೆ’ ಎಂದರು.
ಕನ್ನಡ ನಾಡು, ನುಡಿ, ದೇಶಪ್ರೇಮದ ಕುರಿತ ಸಂದೇಶ, ಜಾಗೃತಿ ಅವರ ಕವಿತೆಗಳಲ್ಲಿ ಇದೆ. ರೈತರ ಬಗ್ಗೆಯೂ ಅವರಲ್ಲಿದ್ದ ಕಾಳಜಿ ಕೃತಿಗಳಲ್ಲಿ ಗೋಚರಿಸುತ್ತವೆ. ಅವರ ಸಂದೇಶಗಳು ಸಾರ್ವಕಾಲಿಕವಾದುದು ಎಂದು ಅವರು ವಿವರಿಸಿದರು.
ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಮಾತನಾಡಿ, ‘ಜಿ.ಡಿ.ಜೋಷಿ ಅವರ ‘ಕನ್ನಡದ ಕಣ್ಮಣಿಗಳು’ ಕೃತಿ ಆಧುನಿಕ ಕನ್ನಡದ ಸಾಹಿತ್ಯ ಚರಿತ್ರೆಯಾಗಿದೆ. ಆ ಕೃತಿಯೇ ಒಂದು ಕಣ್ಮಣಿಯಾಗಿದೆ. 140 ಮಂದಿ ಆಧುನಿಕ ಕವಿಗಳ ವಿವರಗಳ ಪರಿಚಯ ಅದರಲ್ಲಿ ಇದೆ. ಅದೊಂದು ಆಕರ ಗ್ರಂಥವಾಗಿದೆ’ ಎಂದು ಬಣ್ಣಿಸಿದರು.
ಪ್ರೊ.ಎಚ್ಎಸ್ಕೆ ಸಾಹಿತ್ಯ ಪ್ರಶಸ್ತಿಯನ್ನು ಸಾಹಿತಿಗಳಾದ ಶಾರದಾ ವಿ.ಅಂಚನ್, ರತ್ನಾ ಕಾಳೇಗೌಡ, ವಿಜಯಾ ಬಿರಾದಾರ, ಬಿ.ಮಂಜುನಾಥ್ ಸೇರೆಗಾರ, ಹೆಗ್ಗಾರ ಬಾಲಕೃಷ್ಣ ಪೈ ಅವರಿಗೆ ಪ್ರದಾನ ಮಾಡಲಾಯಿತು.
ವಿಶ್ವಕವಿ ಕುವೆಂಪು ಸಾಹಿತ್ಯ ಪ್ರಶಸ್ತಿಯನ್ನು ಸಾಹಿತಿಗಳಾದ ಡಾ.ಜಿ.ಡಿ.ಜೋಷಿ, ಡಾ.ಎಸ್.ಪಿ.ಯೋಗಣ್ಣ, ವಿಶ್ವಕವಿ ಕುವೆಂಪು ಸಮಾಜ ಸೇವಾ ಪ್ರಶಸ್ತಿಯನ್ನು ಸಂಸ್ಕೃತಿ ಪೋಷಕ ಕೆ.ರಘುರಾಮ್ ವಾಜಪೇಯಿ, ಕೆ.ಆರ್.ಸುನೀತಾ, ಡಾ.ಎ.ಪುಷ್ಪಾ ಅಯ್ಯಂಗಾರ್ ಅವರಿಗೆ ಪ್ರದಾನ ಮಾಡಲಾಯಿತು.
ಸಾಮೂಹಿಕ ನೇತ್ರದಾನ ಕಾರ್ಯಕ್ರಮವೂ ನಡೆಯಿತು. ಮುಂಬೈನ ಸಾಹಿತಿ ಡಾ.ಜಿ.ಡಿ.ಜೋಷಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಬನ್ನೂರು ಕೆ.ರಾಜು, ಡಿ.ಎನ್.ಕೃಷ್ಣಮೂರ್ತಿ, ಎ.ಹೇಮಗಂಗಾ, ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಭೇರ್ಯ ರಾಮಕುಮಾರ್, ಕೆ.ಎಸ್.ನಾಗರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.