ಬಾರ್ಕೂರು(ಬ್ರಹ್ಮಾವರ): ಮಳೆಗಾಲ ಆರಂಭವಾಗಲು ಇನ್ನೇನು ಕೆಲವೇ ದಿನಗಳಿವೆ. ಆದರೆ ಬ್ರಹ್ಮಾವರ ಪರಿಸರ ದಲ್ಲಿ ಮುಂಗಾರು ಪೂರ್ವ ಮಳೆ ಇದು ವರೆಗೆ ಆಗದೇ ಇರುವುದರಿಂದ ನೀರಿನ ಸಮಸ್ಯೆ ಉಲ್ಬಣಿಸಿದೆ.
ಗ್ರಾಮಾಂತರ ಪ್ರದೇಶಗಳಲ್ಲಿ ಬಾವಿಗಳು ಒಣಗುತ್ತಿರು ವುದರಿಂದ ಪಂಚಾಯಿತಿ ವತಿಯಿಂದ ನೀಡಲಾಗುವ ನೀರಿನ ಸರಬರಾಜಿಗೆ ಬೇಡಿಕೆ ಹೆಚ್ಚುತ್ತಿದೆ. ಇನ್ನೊಂದೆಡೆ ಪಾಳು ಬಿದ್ದ ಕೆರೆ ಮದಗಗಳ ಹೂಳೆತ್ತುವ ಕಾರ್ಯ ಭರದಿಂದ ಸಾಗುತ್ತಿದೆ.
ಗಾಂಧಿ ಗ್ರಾಮ ಪುರಸ್ಕೃತ ಬಾರ್ಕೂರು ಹನೆಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ಕೃಷಿಕರಿಗೆ ಉಪಯುಕ್ತವಾಗುವಂತೆ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆರೆಗಳ ಹೂಳೆತ್ತುವ ಕಾರ್ಯದಿಂದ ನೀರಿನ ಸಮಸ್ಯೆ ದೂರವಾಗಿ ಕೃಷಿ ಚಟುವಟಿಕೆಗೆಗೂ ಈಗ ಚಾಲನೆ ದೊರೆತಿರುವುದು ಸಂತಸದ ವಿಷಯ.
14ನೇ ಹಣಕಾಸು ಯೋಜನೆಯಲ್ಲಿ ಹಳೆಯದಾದ ಕೆರೆಯನ್ನು ಹೂಳೆತ್ತಿ ಅಂತರ್ಜಲವನ್ನು ಹೆಚ್ಚಿಸುವ ಕಾರ್ಯಮಾಡಿ ಇತರೆ ಪಂಚಾಯಿತಿಗಳಿಗೂ ಮಾದರಿಯಾಗಿದೆ.
ಮೂರು ಅಡಿ ನೀರು ಶೇಖರಣೆ
ಇಲ್ಲಿನ ಉದ್ಯೋಗ ಖಾತರಿ ಯೋಜನೆಯ 528 ಸದಸ್ಯರಲ್ಲಿ ಕೂರಾಡಿಯ 35 ಮಂದಿ 74 ದಿನಗಳ ಕೂಲಿಯಲ್ಲಿ ಕೆಳಬೈಲ್ ಕೆರೆಯನ್ನು ₹75 ಸಾವಿರ ವೆಚ್ಚದಲ್ಲಿ ಮತ್ತು ಮಾದಪ್ಪನ ಕೆರೆಯ ಹೂಳನ್ನು ₹3 ಲಕ್ಷ ವೆಚ್ಚದಲ್ಲಿ ತೆಗೆಯಲಾಗಿದೆ.
ಹೂಳನ್ನು ತೆಗೆದ ನಂತರ ಇಲ್ಲಿಯ ಕೆರೆಯಲ್ಲಿ ಸುಮಾರು 3 ಅಡಿ ನೀರು ಶೇಖರಣೆಯಾಗಿದ್ದು ಪಂಪ್ ಮೂಲಕ ನೀರನ್ನು ತೆಗೆದರೂ ನೀರು ಇಂಗುತ್ತಿಲ್ಲ. ಆಸುಪಾಸಿನ ರೈತರು ಇದೇ ನೀರನ್ನು ಬಳಸಿ ಕೃಷಿಚಟುವಟಿಕೆಯನ್ನೂ ಆರಂಭಿಸಿದ್ದಾರೆ.
ಒಟ್ಟಾರೆಯಾಗಿ ಗ್ರಾಮೀಣ ಭಾಗದಲ್ಲಿನ ಕೃಷಿಕರಿಗೆ ವರದಾನವಾಗುವ ಇಂತಹ ಯೋಜನೆಗಳು ಅವರಿಗೆ ಅನುಕೂಲವಾಗುವಂತೆ ಪಂಚಾಯಿತಿ ಅಧಿಕಾರಿಗಳು ಯೋಜನೆಗಳನ್ನು ರೂಪಿಸಿದಲ್ಲಿ ಗ್ರಾಮದ ಸಮಸ್ಯೆಗಳಿಗೆ ಪರಿಹಾರ ಸಿಗುವಂತಾಗುತ್ತದೆ. ಇದಲ್ಲದೇ ಕೃಷಿಕರಿಗೂ ವರದಾನವಾಗಲಿದೆ.