ಹುನಗುಂದ: ತಾಲ್ಲೂಕಿನ ಬಹುದಿನಗಳ ಬೇಡಿಕೆಯ ಇಲಾಳ ಸೇರಿದಂತೆ 18 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾರ್ಯ ಇನ್ನು 10 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದಕ್ಕೆ ₹ 48.25 ಕೋಟಿ ಅನುದಾನ ಖರ್ಚು ಮಾಡಲಾಗಿದೆ ಎಂದು ಶಾಸಕ ವಿಜಯಾ ನಂದ ಕಾಶಪ್ಪನವರ ಹೇಳಿದರು.
ಈಚೆಗೆ ಅವರು ಮರೋಳ ಸಮೀಪದ ಕೃಷ್ಣಾ ನದಿ ತೀರದಲ್ಲಿ ನಡೆದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು. 110 ಕಿಮೀ ಪೈಪ್ ಲೈನ್ ಮಾಡುತ್ತಿದ್ದು ಬನ್ನಿಹಟ್ಟಿಯಲ್ಲಿ ಶುದ್ಧೀಕರಣ ಕೇಂದ್ರ ಸ್ಥಾಪಿಸಲಾಗುತ್ತಿದೆ.
ಅದರ ಕಾಮಗಾರಿಯೂ ಪ್ರಗತಿಯಲ್ಲಿದೆ. ಈ ಯೋಜನೆಯಿಂದ ಇಲಾಳ, ಬನ್ನಿ ಹಟ್ಟಿ, ವೀರಾಪುರ, ಚಿತ್ತವಾಡಗಿ, ಹಿರೇ ಬಾದವಾಡಗಿ, ಯಡಹಳ್ಳಿ, ನಾಗೂರ, ಗೊರ್ಜನಾಳ, ತಳ್ಳಿಕೇರಿ, ಕೆಲೂರ, ಬೆನಕನವಾರಿ, ಸಿದ್ದನಕೊಳ್ಳ, ಉಪನಾಳ ದಮ್ಮೂರ, ವಡಗೇರಿ, ಗುಡೂರ, ಚಿಕ ನಾಳ ಮತ್ತು ಭೀಮನಗಡ ಗ್ರಾಮಗಳಿಗೆ ನೀರು ದೊರೆಯಲಿದೆ ಎಂದರು.
ಯೋಜನೆಯನ್ನು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ ಮಾಡುತ್ತಿದ್ದು ಮೊದಲು ಇದು ಮಲಪ್ರಭಾ ನದಿಯಿಂದ ನೀರು ತರುವುದಾಗಿತ್ತು. ಅಲ್ಲಿ ಸಾಕಷ್ಟು ನೀರು ಸಿಗುವುದಿಲ್ಲ ಎಂಬ ಕಾರಣದಿಂದ ಬದ ಲಾಯಿಸಿದೆ ಎಂದರು. ತಾ.ಪಂ. ಅಧ್ಯಕ್ಷ ಅಮೀನಪ್ಪ ಸಂದಿಗವಾಡ, ಮಂಜು ಗೌಡರ, ಮಹಾಂತೇಶ ಅವಾರಿ, ಮಲ್ಲು ವೀರಾಪುರ, ಹುಚ್ಚೇಶ ಕಾಳಹಸ್ತಿಮಠ, ಮುತ್ತು ಕಲಗೋಡಿ, ಎಂ.ಎಸ್.ಕೆರೂರ, ಪೂಜಾರ, ಮುರಳೀಧರ ಇದ್ದರು.