ಹಾಸನ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆಯಬೇಕು ಎಂದು ಉಪ ವಿಭಾಗಾಧಿಕಾರಿ ಎಚ್.ಎಲ್. ನಾಗರಾಜ್ ಕರೆ ನೀಡಿದರು.
ನಗರದ ಬಿಳಿಯಮ್ಮ ಈರೇಗೌಡ ಪ್ರಥಮ ದರ್ಜೆ ಕಾಲೇಜಿನ ಎಂ.ಕಾಂ ಸ್ನಾತಕೋತ್ತರ ಕೇಂದ್ರದಲ್ಲಿ ಶುಕ್ರವಾರ ಆರಂಭವಾದ ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆ ಉಚಿತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯಲು ಮೈಸೂರು, ಬೆಂಗಳೂರಿನಂತಹ ಮಹಾನಗರಗಳಿಗೆ ಹೋಗಬೇಕಿತ್ತು.
ಆದರೆ ಸರ್ಕಾರ ತಾಲ್ಲೂಕು ಕೇಂದ್ರಗಳ ಪ್ರಥಮ ದರ್ಜೆ ಕಾಲೇಜುಗಳಲ್ಲೂ ಸ್ನಾತಕೋತ್ತರ ಕೇಂದ್ರಗಳನ್ನು ತೆರೆದಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಪದವೀಧರರು ಉನ್ನತ ಶಿಕ್ಷಣ ಪಡೆಯುವುದರ ಜೊತೆ, ಜೊತೆಯಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಜ್ಜಾಗಬೇಕು.
ಇದರಿಂದ ವರ್ಷಗಳು ವ್ಯರ್ಥವಾಗುವುದು ತಪ್ಪಿ ಚಿಕ್ಕ ವಯಸ್ಸಿನಲ್ಲೇ ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಕೀಳರಿಮೆ ಬೆಳೆಸಿಕೊಂಡರೆ ಸಾಮರ್ಥ್ಯ ಹೊರಹಾಕಲು ಸಾಧ್ಯವಾಗುವುದಿಲ್ಲ. ಹಿಂಜರಿಕೆ ತೊರೆದು ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು. ಕಷ್ಟಪಟ್ಟರೆ ಪ್ರತಿಫಲ ಸಿಗುತ್ತದೆ ಎಂದು ಕಿವಿಮಾತು ಹೇಳಿದರು.
ಗೊರೂರು ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಮಹೇಶ್ ಮಾತನಾಡಿ, ಶಿಕ್ಷಣದೊಂದಿಗೆ ಜೀವನ ಮೌಲ್ಯಗಳು ಮತ್ತು ಸಾಮಾಜಿಕ ಕಳಕಳಿ ಮೈಗೂಡಿಸಿಕೊಳ್ಳಬೇಕು. ಸಮಯ ಎಲ್ಲರಿಗೂ ಒಂದೇ. ಅದನ್ನು ಸದುಪಯೋಗಪಡಿಸಿಕೊಂಡವರು ಗೆಲ್ಲುತ್ತಾರೆ. ವ್ಯರ್ಥ ಮಾಡಿದವರು ಸೋಲುತ್ತಾರೆ ಎಂದು ನುಡಿದರು. ಬಿಈಜಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಬಿ.ಈ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು.
ಸಂಜೆ ಕಾಲೇಜು ಪ್ರಾಂಶುಪಾಲರಾದ ಎಚ್.ಎ. ರೇಖಾ ಮತ್ತು ಪ್ರಾಧ್ಯಾಪಕ ಹೆಚ್.ಬಿ. ಅಜಿತ್ ಪ್ರಸಾದ್ ಇದ್ದರು. ಸ್ನಾತಕೋತ್ತರ ಕೇಂದ್ರದ ಸಂಯೋಜಕ ಎಚ್.ಬಿ. ಮನು ಹಿರಿಯಾಳ್, ಪ್ರಾಧ್ಯಾಪಕ ಎಚ್.ಆರ್. ಧನಂಜಯ್, ಬಿ.ಎನ್.ದೇವರಾಜು ಈ ಸಂದರ್ಭದಲ್ಲಿ ಇದ್ದರು.