ಬೇಲೂರು: ಗುತ್ತಿಗೆ ಪದ್ಧತಿ ರದ್ದುಪಡಿಸಿ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸುವಂತೆ ಆಗ್ರಹಿಸಿ ಇಲ್ಲಿನ ಪುರಸಭೆಯ ಗುತ್ತಿಗೆ ಪೌರ ಕಾರ್ಮಿಕರು ಸೋಮವಾರದಿಂದ ಪುರಸಭೆಯ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ಮುಂಜಾನೆಯಿಂದಲೇ ಪಟ್ಟಣದ ಸ್ವಚ್ಛತೆ ಹಾಗೂ ಇತರ ಕೆಲಸಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ 39 ಗುತ್ತಿಗೆ ಪೌರ ಕಾರ್ಮಿಕರು ಕಾಯಂಗೊಳಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು.
ಬೇಲೂರು ಪುರಸಭೆಯ ಗುತ್ತಿಗೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ವಿಶ್ವನಾಥ್, ‘ನಾವು ಗುತ್ತಿಗೆ ಪೌರ ಕಾರ್ಮಿಕರಾಗಿ ಕಳೆದ 10–15 ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಕಡಿಮೆ ಸಂಬಳಕ್ಕೆ ಬೆಳಿಗ್ಗೆ 5ರಿಂದ ಸಂಜೆಯವರೆಗೆ ದುಡಿಯುತ್ತಿದ್ದೇವೆ.
ಆದರೂ, ಸರ್ಕಾರ ನಮ್ಮನ್ನು ಕಾಯಂಗೊಳಿಸಲು ಕ್ರಮ ಕೈಗೊಂಡಿಲ್ಲ. ಕಾಯಂಗೊಳಿಸುವವರೆಗೆ ಅನಿರ್ದಿಷ್ಟಾವಧಿ ಮುಷ್ಕರ ಹಿಂತೆಗೆದುಕೊಳ್ಳುವುದಿಲ್ಲ’ ಎಂದು ತಿಳಿಸಿದರು.
ಕಾರ್ಯದರ್ಶಿ ಉಮೇಶ, ಉಪಾಧ್ಯಕ್ಷ ನಾಗರಾಜ್ ಈ ಸಂದರ್ಭದಲ್ಲಿ ಇದ್ದರು