ಸಿದ್ದಾಪುರ: ಸಮೀಪದ ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭ್ಯತ್ಮಂಗಲ ಗ್ರಾಮದ ಕಾಫಿ ತೋಟವೊಂದರಲ್ಲಿ ಕೆಸರಿನಲ್ಲಿ ಸಿಕ್ಕು ಕಾಡಾನೆ ಮರಿಯೊಂದು ಮಂಗಳವಾರ ಸಾವನ್ನಪ್ಪಿದೆ.
ಕಾಫಿ ಬೆಳೆಗಾರರಾದ ಶ್ಯಾಂ ಪ್ರಸಾದ್ ಎಂಬುವವರ ತೋಟದಲ್ಲಿ ಅಂದಾಜು 6 ವರ್ಷ ಪ್ರಾಯದ ಆನೆ ಮರಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡು ಬಂದಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.
ಸ್ಥಳಕ್ಕೆ ಡಿಎಫ್ಓ ಸೂರ್ಯಸೇನ್, ವಲಯ ಅರಣ್ಯ ಅಧಿಕಾರಿ ಬಾನಂಡ ದೇವಿಪ್ರಸಾದ್, ಉಪವಲಯ ಅರಣ್ಯಾಧಿಕಾರಿ ರಂಜನ್ ಭೇಟಿ ನೀಡಿ ಜೆಸಿಬಿ ಬಳಸಿ ಆನೆಯನ್ನು ಮೇಲೆತ್ತಿದರು.
ಎರಡು ದಿನಗಳ ಹಿಂದೆ ಕೆಸರಿನಲ್ಲಿ ಹೂತು ಮೇಲೇಳಲಾಗದೇ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. ವೈದ್ಯಾಧಿಕಾರಿ ಡಾ.ಉಮಾಶಂಕರ್ ಮರಣೋತ್ತರ ಪರೀಕ್ಷೆ ನಡೆಸಿದರು.