ಬೆಂಗಳೂರು: ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ರಾಜ್ಯ ಸರ್ಕಾರದಿಂದ ನೆರವು ಕೋರಲು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಶಾಸಕರಾದ ರಾಜಶೇಖರ ಪಾಟೀಲ ಹುಮ್ನಾಬಾದ್, ಅಶೋಕ್ ಖೇಣಿ ಮೊದಲಾದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದಲ್ಲಿ ಭೇಟಿಯಾಗಿದ್ದರು.
ದುಡಿಮೆ ಬಂಡವಾಳವಾಗಿ ₹50 ಕೋಟಿ ಕೊಡಿ, ಕಾರ್ಖಾನೆ ಪುನುರುದ್ಧಾರ ಮಾಡ್ತೀವಿ ಎಂದು ಖೇಣಿ ಮನವಿ ಮಾಡಿದರು. ಅವರ ಪಕ್ಕದಲ್ಲಿದ್ದ ವ್ಯಕ್ತಿಯನ್ನು ನೋಡಿದ ಸಿದ್ದರಾಮಯ್ಯ, ‘ಇವರು ಯಾರು’ ಎಂದು ಪ್ರಶ್ನಿಸಿದರು.
‘ಅವ್ರು ಮಿಸ್ಟರ್ ಸಂಜಯ್ ಖೇಣಿ, ಶುಗರ್ ಫ್ಯಾಕ್ಟರಿ ನಿರ್ದೇಶಕರು. ಮೈ ಬ್ರದರ್’ ಎಂದು ಅಶೋಕ್ ಖೇಣಿ ಉತ್ತರಿಸಿದರು. ಅವರನ್ನು ಮೇಲಿನಿಂದ ಕೆಳಗಿನವರೆಗೆ ನೋಡಿದ ಸಿದ್ದರಾಮಯ್ಯ, ‘ಇವ್ರು ನಿಮ್ಮ ಸ್ವಂತ ತಮ್ಮನಾ? ಬಾಡಿಗೆ ತಮ್ಮನಾ?’ ಎಂದು ನಗುತ್ತಲೇ ಪ್ರಶ್ನಿಸಿದರು.
‘ಮೈ ಓನ್ ಬ್ರದರ್’ ಎಂದು ಖೇಣಿ ಉತ್ತರಿಸಿದರು.
‘ಹಾಗಿದ್ದ ಮೇಲೆ ನಿಮಗೆ ಏನ್ರೀ ರೋಗ. ₹50 ಕೋಟಿ ಅಲ್ಲ, ₹100 ಕೋಟಿ ನೀವೇ ಕೊಟ್ಟು ಫ್ಯಾಕ್ಟರಿ ನಡೆಸ್ರಿ’ ಎಂದು ಸಿದ್ದರಾಮಯ್ಯ ಸಲಹೆ ನೀಡಿದಾಗ ಸಚಿವ ಖಂಡ್ರೆ ಬೆರಗಾಗಿ ನಿಂತಿದ್ದರು.