ಸಕಲೇಶಪುರ: ಗುದ್ದಲಿ ಹಿಡಿದು ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿ ಕೆಲಸಕ್ಕಿಳಿದ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಡಿ. ವಿಜಯ್ಕುಮಾರ್ ಹೊಸ ಬಾವಿಯಿಂದ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜಾಗುವಂತೆ ಮಾಡಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಕರವಳ್ಳಿ ಗ್ರಾಮದ ಓದಯ್ಯನಕೆರೆಯಲ್ಲಿ ತೆರೆದ ಬಾವಿಯನ್ನು ಗ್ರಾ.ಪಂ. ವತಿಯಿಂದ ನಿರ್ಮಿಸಲಾಗಿದೆ. ಬಾವಿಯಿಂದ ಮುಖ್ಯ ನೀರು ಸರಬರಾಜು ಪೈಪ್ಲೈನ್ಗೆ 2.5 ಇಂಚು ಪೈಪ್ ಅಳವಡಿಸುವ ಕಾಮಗಾರಿ ಶುರು ಮಾಡಿ ಒಂದು ತಿಂಗಳು ಕಳೆದಿದೆ. ಕಾಮಗಾರಿ ಮುಗಿಯದೆ ಇರುವುದರಿಂದ ಗ್ರಾಮಕ್ಕೆ ನೀರಿನ ಸಮಸ್ಯೆ ಕಾಡುತ್ತಿತ್ತು.
ನಿತ್ಯ ಮಳೆ ಸುರಿಯುತ್ತಿರುವುದರಿಂದ ಪೈಪ್ ಅಳವಡಿಸಲು ತೆಗೆದ ಚರಂಡಿಯೊಳಗೆ ಮಣ್ಣು ತುಂಬಿ ಕೊಳ್ಳುತ್ತಿದೆ. ಇದರಿಂದ ಕೆಲಸಕ್ಕೆ ಜನ ಬರದೆ ಕಾಮಗಾರಿ ಪೂರ್ಣಗೊಳಿ ಸುವುದಕ್ಕೆ ಆಗುತ್ತಿಲ್ಲ. ಇದರಿಂದ ರೋಸಿಹೋದ ವಿಜಯ್ಕುಮಾರ್ ಭಾನುವಾರ ನೀರುಗಂಟಿ ತೇಜೇಶ್ ಅವರೊಂದಿಗೆ ಮಳೆಯಲ್ಲಿಯೇ ಗುದ್ದಲಿ ಹಿಡಿದು ಪೈಪ್ ಹಾಕುವ ಕೆಲಸಕ್ಕೆ ನಿಂತರು.
ಅಧ್ಯಕ್ಷರೇ ಗುದ್ದಲಿ ಹಿಡಿದು ಕೆಲಸ ಮಾಡಲು ಮುಂದಾಗಿ ರುವುದು ತಿಳಿ ಯುತ್ತಿದ್ದಂತೆ ಗ್ರಾಮಸ್ಥರೂ ಕೆಲಸಕ್ಕೆ ಸಾಥ್ ನೀಡಿದರು. ಎಲ್ಲರೂ ಕೈಜೋಡಿಸಿದ್ದರಿಂದ ಸಂಜೆ ಯೊಳಗೆ ಪೈಪ್ ಅಳವಡಿಸಿ ಹೊಸ ಬಾವಿಯಿಂದ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಸಹ ಆಯಿತು.
‘ಬ್ಯಾಕರವಳ್ಳಿ ಗ್ರಾಮ ಭೂ ವಿಸ್ತೀರ್ಣದಲ್ಲಿ ಬಹಳ ದೊಡ್ಡ ಊರು. ಗ್ರಾಮ ಮೂರು ಭಾಗದಲ್ಲಿ ಇದೆ. ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಆದ್ದರಿಂದ ಓದಯ್ಯನ ಕೆರೆಯಲ್ಲಿ ನರೇಗಾ ಯೋಜನೆಯಡಿ ₹ 4 ಲಕ್ಷ ವೆಚ್ಚದಲ್ಲಿ ತೆರೆದ ಬಾವಿ ತೆಗೆಯಲಾಗಿದೆ.
ಅಲ್ಲಿಂದ ಗ್ರಾಮದ ಮುಖ್ಯ ಪೈಪ್ಲೈನ್ಗೆ ನೀರು ಸರಬರಾಜು ಮಾಡುವ ಕಾಮಗಾರಿಯನ್ನು ಪ್ರಾರಂಭಿಸಿ ತಿಂಗಳು ಕಳೆದರೂ ಕೆಲಸಕ್ಕೆ ಜನ ಬರಲಿಲ್ಲ. ಆದ್ದರಿಂದ ನಾನೇ ಕಾಮಗಾರಿ ಮಾಡಲು ಮುಂದಾಗಬೇಕಾಯಿತು. ಗ್ರಾಮಸ್ಥ ರೆಲ್ಲರೂ ಸಹಕಾರ ನೀಡಿದ್ದರಿಂದ ಕಾಮಗಾರಿ ಪೂರ್ಣಗೊಂಡು ನೀರು ಸರಬರಾಜು ಮಾಡಲಾಗಿದೆ’ ಎಂದು ಅಧ್ಯಕ್ಷ ವಿಜಯ್ಕುಮಾರ್
ಹೇಳಿದರು.
* *
ಅಧ್ಯಕ್ಷರೇ ಗುದ್ದಲಿ ಹಿಡಿದು ಪೈಪ್ಲೈನ್ ಕೆಲಸ ಮಾಡಲು ಹೊರಟಿದ್ದರಿಂದ ಗ್ರಾಮಸ್ಥರು ಅವರೊಂದಿಗೆ ಕೈಜೋಡಿಸಿದರು. ಇದು ಇತರರಿಗೆ ಮಾದರಿಯಾಗಬೇಕು
ಬಿ.ಎಸ್.ಮೋಹನ್
ಬ್ಯಾಕರವಳ್ಳಿ ಗ್ರಾಮಸ್ಥ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.