ದೆಹಲಿಯಲ್ಲಿ ಚೀನದ ರಾಯಭಾರಿ ಕಚೇರಿ ಮೇಲೆ ನಿರ್ಬಂಧ
ದೆಹಲಿ, ಜೂ. 19– ಈ ಸಂಜೆ ಆರು ಗಂಟೆಯಿಂದ ದೆಹಲಿಯಲ್ಲಿರುವ ಚೀನಾ ರಾಯಭಾರಿ ಕಚೇರಿ ಮೇಲೆ ನಿರ್ಬಂಧವನ್ನು ವಿಧಿಸಲಾಯಿತು. ಈ ನಿರ್ಧಾರವನ್ನು ಸಚಿವ ಸ್ವರಣ್ ಸಿಂಗ್ ಸಂಜೆ ಲೋಕಸಭೆಯಲ್ಲಿ ಪ್ರಕಟಿಸಿದರು.
‘ಪೀಕಿಂಗ್ನಲ್ಲಿರುವ ನಮ್ಮ ರಾಯಭಾರಿ ಕಚೇರಿಯ ಸಿಬ್ಬಂದಿ ವರ್ಗದ ಕುಟುಂಬದವರನ್ನು ಭಾರತಕ್ಕೆ ಕರೆಸಿಕೊಳ್ಳಲು ನಾವು ನಮ್ಮ ವಿಮಾನವನ್ನು ಕಳುಹಿಸಲು ಉದ್ದೇಶಿಸಿದ್ದೇವೆ. ಅವರು ತಮ್ಮ ಗಂಟುಮೂಟೆಗಳೊಡನೆ ಇಲ್ಲಿಗೆ ಬರುವವರೆಗೆ ಗಾಯಗೊಂಡಿರುವ ಚೀನೀ ರಾಜತಾಂತ್ರಿಕರನ್ನು ವಾಪಸು ಒಯ್ಯಲು ಚೀನಾ ವಿಮಾನ ಭಾರತಕ್ಕೆ ಬರಲೂ ಅವಕಾಶ ನೀಡುವುದಿಲ್ಲ’ ಎಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ತಿಳಿಸಿದರು.
ಟಿಬೆಟ್ ಬಗ್ಗೆ ಭಾರತದ ನೀತಿ ಬದಲಾವಣೆ ಕಾಲವಿನ್ನೂ ಬಂದಿಲ್ಲ: ಸ್ವರಣ್ಸಿಂಗ್
ನವದೆಹಲಿ, ಜೂನ್ 19– ಟಿಬೆಟ್ ಬಗ್ಗೆ ಚೀನದೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ಭಾರತ ನಿರಾಕರಿಸಬೇಕಾದ ಕಾಲವಿನ್ನೂ ಬಂದಿಲ್ಲವೆಂದು ರಕ್ಷಣಾ ಮಂತ್ರಿ ಶ್ರೀ ಸ್ವರಣ್ ಸಿಂಗ್ ಅವರು ಇಂದು ಲೋಕಸಭೆಗೆ ತಿಳಿಸಿದರು.
ವಿದೇಶಾಂಗ ಸಚಿವರ ಪರವಾಗಿ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದ ಶ್ರೀ ಸ್ವರಣ್ ಸಿಂಗ್ ಅವರು ಟಿಬೆಟ್ ಬಗ್ಗೆ ಸರ್ಕಾರದ ನೀತಿಯನ್ನು ಎಷ್ಟೋ ಬಾರಿ ಸ್ಪಷ್ಟಪಡಿಸಲಾಗಿದೆ ಎಂದರು.