ಭೋಪಾಲ್: ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿ ಸಂಭ್ರಮಾಚರಣೆ ನಡೆಸಿದ್ದ 15 ಜನರ ವಿರುದ್ಧದ ದೇಶದ್ರೋಹದ ಪ್ರಕರಣವನ್ನು ಮಧ್ಯ ಪ್ರದೇಶ ಪೊಲೀಸರು ಕೈಬಿಟ್ಟಿದ್ದಾರೆ.
ಭಾನುವಾರ ಚಾಂಪಿಯನ್ಸ್ ಟ್ರೋಫಿ ಅಂತಿಮ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 180 ರನ್ಗಳಿಂದ ಸೋಲುತ್ತಿದ್ದಂತೆ ಮೊಹದ್ ಪ್ರದೇಶದಲ್ಲಿ ಗುಂಪುಗೂಡಿದ ಹಲವರು ಪಾಕಿಸ್ತಾನದ ಪರ ಘೋಷಣೆ ಕೂಗಿ ಪಟಾಕಿ ಸಿಡಿಸಿರುವ ಕುರಿತು ಸ್ಥಳೀಯರು ದೂರು ನೀಡಿದ್ದರು.
ಈ ಸಂಬಂಧ ತನಿಖೆ ನಡೆಸಿದ್ದ ಷಹಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಐಪಿಸಿ ಸೆಕ್ಷನ್ 124ಎ(ದೇಶದ್ರೋಹ) ಅಡಿಯಲ್ಲಿ 15 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಸೋಮವಾರ ಬುರ್ಹಾನ್ಪುರ ಜಿಲ್ಲೆಯಲ್ಲಿ ಬಂಧಿಸಲಾದ 15 ಜನರು ದಿನಗೂಲಿ ಕಾರ್ಮಿಕರಾಗಿದ್ದು ಯಾವುದೇ ಅಪರಾಧದ ಹಿನ್ನೆಲೆ ಇರಲಿಲ್ಲ. ಬಂಧಿತ ಆರೋಪಿಗಳ ಪರವಾಗಿ ಅವರ ಕುಟುಂಬ ರಾಷ್ಟ್ರಪತಿಗಳು, ರಾಷ್ಟ್ರ ಮತ್ತು ರಾಜ್ಯ ಮಾನವ ಹಕ್ಕು ಆಯೋಗ, ಅಲ್ಪಸಂಖ್ಯಾತರ ಆಯೋಗಗಳ ಮೊರೆ ಹೋಗಿದ್ದರು.
ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ದೇಶದ್ರೋಹದ ಪ್ರಕರಣವನ್ನು ಕೈಬಿಟ್ಟಿದ್ದು, ಕೋಮು ಸೌಹಾರ್ದತೆಗೆ ದಕ್ಕೆಯುಂಟು ಮಾಡಿರುವುದರಿಂದ ಸೆಕ್ಷನ್ 153ಎ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಬುರ್ಹಾನ್ಪುರ ಪೊಲೀಸ್ ವರಿಷ್ಠಾಧಿಕಾರಿ ರಾಜಾರಾಮ್ ಸಿಂಗ್ ಪರಿಹಾರ್ ತಿಳಿಸಿರುವುದಾಗಿ ‘ದಿ ಹಿಂದು’ ವರದಿ ಮಾಡಿದೆ.