ಬೆಂಗಳೂರು: ‘ಯಾರೋ ಒಬ್ಬ ವೈದ್ಯರು ವೃತ್ತಿಗೆ ದ್ರೋಹ ಬಗೆದರೆ ಎಲ್ಲಾ ವೈದ್ಯರನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು’ ಎಂದು ಆಕ್ಸಿಸ್ ಆಸ್ಪತ್ರೆ ನಿರ್ದೇಶಕ ಡಾ.ಸಾಂಭಶಿವ ಬೇಸರ ವ್ಯಕ್ತಪಡಿಸಿದರು.
ವೈಟ್ಫೀಲ್ಡ್ ಮುಖ್ಯರಸ್ತೆಯ ಬೆಳತೂರು ಬಳಿ ನಿರ್ಮಿಸಿರುವ ನೂರುಹಾಸಿಗೆ ಸಾಮರ್ಥ್ಯದ ಆಕ್ಸಿಸ್ ಆಸ್ಪತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಲು ಚಿಕಿತ್ಸೆಗಳ ದರಪಟ್ಟಿಯನ್ನು ಆಸ್ಪತ್ರೆಗಳಲ್ಲಿ ಪ್ರಕಟಿಸಬೇಕೆಂಬ ವಿಧೇಯಕ ಅಂಗೀಕರಿಸಲು ನಿರ್ಧರಿಸಿದೆ. ಆ ಮಸೂದೆಯಲ್ಲಿ ವೈದ್ಯರನ್ನು ತಪ್ಪಿತಸ್ಥರಂತೆ ಬಿಂಬಿಸಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ‘ಆಸ್ಪತ್ರೆಗಳು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಅನಾರೋಗ್ಯದಿಂದ ಬರುವ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿ ಮಾನಸಿಕವಾಗಿ ಸದೃಢರಾಗುವಂತೆ ಮಾಡಬೇಕು’ಎಂದು ಸಲಹೆ ನೀಡಿದರು.