ಅಜ್ಜಂಪುರ: ನೀರಿಗಾಗಿ ರಾತ್ರಿಯಿಡೀ ನಿದ್ದೆಯಿಲ್ಲದೇ ಕಾದು ಕುಳಿತುಕೊಳ್ಳುವ ಗಂಭೀರ ಸ್ಥಿತಿಯನ್ನು ಪಟ್ಟಣ ಸಮೀಪ ನಾಗವಂಗಲ ಗ್ರಾಮಸ್ಥರು ಅನುಭವಿಸುತ್ತಿದ್ದಾರೆ.
ಕೊರಟೀಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸುಮಾರು 350 ಮನೆಗಳ 2 ಸಾವಿರ ಜನಸಂಖ್ಯೆಯುಳ್ಳ ನಾಗವಂಗಲದಲ್ಲಿ ಒಂದು ತಿಂಗ ಳಿಂದಲೂ ನೀರಿಗೆ ಹಾಹಾಕಾರವಿದೆ. ಪಂಚಾಯಿತಿ ವ್ಯಾಪ್ತಿಯ 6 ಕೊಳವೆ ಬಾವಿಗಳ ಪೈಕಿ 2 ಮಾತ್ರ ನೀರು ಪೂರೈಸುತ್ತಿವೆ.
ಕೊಳವೆ ಬಾವಿಗಳಿಗೆ ಅಳವಡಿ ಸಿರುವ ಪಂಪ್ಗಳು ಹಗಲಿನಲ್ಲಿ ಕಾರ್ಯನಿರ್ವಹಿಸಲು ವೋಲ್ಟೇಜ್ ಕೊರತೆ ಕಾಡುತ್ತಿದೆ. ಹಾಗಾಗಿ, ರಾತ್ರಿ ಹೊತ್ತು ಹೆಚ್ಚಿನ ವೋಲ್ಟೇಜ್ ಇರುವುದರಿಂದ ರಾತ್ರಿ ಹೊತ್ತು ಕೊಳವೆಬಾವಿ ಬಳಿ ಗ್ರಾಮಸ್ಥರು ಕೊಡ ಹಿಡಿದು ನಿಲ್ಲುವಂತಾಗಿದೆ.
‘ಜೀವನ ನಿರ್ವಹಣೆಗೆ ಕೂಲಿ ಮಾಡುತ್ತೇವೆ. ನೀರು ಪಡೆಯಲು ರಾತ್ರಿಯಿಡೀ ಕಾಯುತ್ತೇವೆ. ಹಗಲಿನಲ್ಲಿ ದಣಿದು ಸಾಕಾಗುವ ನಾವು ನೆಮ್ಮದಿಯಾಗಿ ಮಲಗಲು ಸಾಧ್ಯ ಆಗದ ಅನಿವಾರ್ಯ ಸ್ಥಿತಿಯಲ್ಲಿದ್ದೇವೆ. ನಮ್ಮ ನೀರಿನ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು’ ಎಂದು ಮಂಜುನಾಥ್ ಒತ್ತಾಯಿಸಿದ್ದಾರೆ.
‘ಈ ಬಗ್ಗೆ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಅಲ್ಲದೆ, ತಾಲ್ಲೂಕು ಮಟ್ಟಡ ಅಧಿಕಾರಿಗಳಿಗೂ ತಿಳಿಸಲಾಗಿದೆ. ಯಾರೊಬ್ಬರೂ ಗಮನ ಹರಿಸಿಲ್ಲ. ಕೂಡಲೇ ಜಿಲ್ಲಾಡಳಿತ, ನಮ್ಮ ನೆರವಿಗೆ ಧಾವಿಸಿ, ನೀರಿನ ಭವಣೆಯನ್ನು ನೀಗಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.