ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ ರೈ ‘ಸದ್ಯಕ್ಕೆ ಚುನಾವಣೆಯನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ನಿರ್ಧರಿಸಬೇಕಾಗಿದೆ’ ಎಂದು ತಿಳಿಸಿದರು. ‘ಚುನಾವಣಾ ಅಧಿಕಾರಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. ಶುಕ್ರವಾರ ಮೊದಲು ದೂರವಾಣಿ ಕರೆ ಮಾಡಿ, ನಂತರ ಪತ್ರ ಕಳುಹಿಸಿ ಚುನಾವಣಾ ಪ್ರಕ್ರಿಯೆ ಮುಂದುವರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಶನಿವಾರ ನಾಮಪತ್ರ ಪರಿಶೀಲನೆ ನಡೆಯಲಿಲ್ಲ’ ಎಂದು ತಿಳಿಸಿದ ರೈ ‘ತಮಗೆ ಬರಲು ಸಾಧ್ಯವಾಗದಿದ್ದರೆ ಪ್ರತಿನಿಧಿಯಾಗಿ ಯಾರನ್ನಾದರೂ ಕಳುಹಿಸಬೇಕಾಗಿತ್ತು. ಇದ್ಯಾವುದನ್ನೂ ಮಾಡದೆ ಚುನಾವಣಾ ಅಧಿಕಾರಿ ನುಣುಚಿಕೊಂಡಿದ್ದಾರೆ. ಹೊಸತಾಗಿ ಪ್ರಕ್ರಿಯೆಯನ್ನು ಆರಂಭಿಸುವ ಅನಿವಾರ್ಯ ಸ್ಥಿತಿ ಈಗ ನಿರ್ಮಾಣವಾಗಿದೆ’ ಎಂದರು.