ಹಾಸನ: ಜೈನಕಾಶಿ ಶ್ರವಣಬೆಳಗೊಳದಲ್ಲಿ ಮುಂದಿನ ವರ್ಷ ನಡೆಯಲಿರುವ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಭದ್ರತೆಗಾಗಿ 9,000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುತ್ತಿದೆ.
ಫೆ. 7ರಿಂದ ಆರಂಭವಾಗುವ 20 ದಿನಗಳ ಮಹೋತ್ಸವದಲ್ಲಿ ಸುಮಾರು 40 ಲಕ್ಷ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ. ಮೂರು ಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ ₹4 ಕೋಟಿ ವೆಚ್ಚ ಮಾಡಲಾಗುತ್ತಿದೆ. 25 ಡ್ರೋನ್, 100 ಲೋಹ ಶೋಧಕ ಉಪಕರಣ ಹಾಗೂ ಪ್ರಮುಖ ಸ್ಥಳಗಳಲ್ಲಿ 150 ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.
ಶ್ರವಣಬೆಳಗೊಳ ಪ್ರವೇಶಿಸುವವರು ಮೂರು ಹಂತದ ತಪಾಸಣೆಗೆ ಒಳಪಡಬೇಕಿದೆ. ಮೊದಲು ಚೆಕ್ಪೋಸ್ಟ್ ಬಳಿ ವಾಹನಗಳ ತಪಾಸಣೆ ನಡೆಸಿ, ವ್ಯಕ್ತಿಗಳ ಹೆಸರು ಮತ್ತು ವಾಹನದ ಸಂಖ್ಯೆ ಬರೆದುಕೊಳ್ಳಲಾಗುತ್ತದೆ. ನಂತರ ವಾಸ್ತವ್ಯ ಹೂಡುವ ಹೋಟೆಲ್, ವಸತಿಗೃಹ ಹಾಗೂ ಬೆಟ್ಟಕ್ಕೆ ಹೋಗುವವರು ತಪಾಸಣೆಗೆ ಒಳಗಾಗಬೇಕಿದೆ.
ಮಹೋತ್ಸವ ಸುಸೂತ್ರವಾಗಿ ನಡೆಸುವ ಉದ್ದೇಶದಿಂದ ಶ್ವಾನದಳ, ಬಾಂಬ್ ನಿಷ್ಕ್ರೀಯ ದಳ, ಕೆಎಸ್ಆರ್ಪಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕ ದಳ ಮತ್ತು ಸ್ವಯಂ ಸೇವಕರನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. 33 ದಿನ 9 ಸಾವಿರ ಪೊಲೀಸ್ ಸಿಬ್ಬಂದಿ 3 ಪಾಳಿಯಲ್ಲಿ ಕೆಲಸ ನಿರ್ವಹಿಸುವರು.