ನಾರ್ತ್ ಸೌಂಡ್, ಆಂಟಿಗ: ಕ್ರಿಕೆಟ್ ವೆಸ್ಟ್ ಇಂಡೀಸ್ (ಸಿಡಬ್ಲ್ಯುಐ) ಭಾರತದ ವಿರುದ್ಧದ ಏಕದಿನ ಸರಣಿಯ ಮೂರು, ನಾಲ್ಕು ಮತ್ತು ಐದನೇ ಪಂದ್ಯಗಳಿಗೆ ಬುಧವಾರ 13 ಸದಸ್ಯರ ತಂಡವನ್ನು ಪ್ರಕಟಿಸಿದೆ.
ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದ್ದು ಜೊನಾಥನ್ ಕಾರ್ಟರ್ ಮತ್ತು ಕೆಸ್ರಿಕ್ ವಿಲಿಯಮ್ಸ್ ಅವರ ಬದಲಿಗೆ ಕೈಲ್ ಹೋಪ್ ಮತ್ತು ಸುನಿಲ್ ಆ್ಯಂಬ್ರಿಸ್ ಅವರು ಅವಕಾಶ ಪಡೆದಿದ್ದಾರೆ.
‘ಸುನಿಲ್ ಮತ್ತು ಹೋಪ್ ಅವರು ದೇಶಿ ಟೂರ್ನಿಗಳಲ್ಲಿ ಅಮೋಘ ಆಟ ಆಡಿದ್ದಾರೆ. ಹೀಗಾಗಿ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ’ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಕರ್ಟ್ನಿ ಬ್ರೌನ್ ತಿಳಿಸಿದ್ದಾರೆ.
ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಪೋರ್ಟ್ ಆಫ್ ಸ್ಪೇನ್ನಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಭಾರತ 105ರನ್ ಗಳಿಂದ ಗೆದ್ದು ಸರಣಿಯಲ್ಲಿ 1–0ರ ಮುನ್ನಡೆ ಹೊಂದಿದೆ. ಮೂರನೇ ಪಂದ್ಯ ಶುಕ್ರವಾರ ನಾರ್ತ್ ಸೌಂಡ್ನಲ್ಲಿ ನಡೆಯಲಿದೆ.