ಬೆಂಗಳೂರು: ‘ಜಿಎಸ್ಟಿ ಬಂತು...ಜಿಎಸ್ಟಿ ಬಂದ್ಬಿಡ್ತು...’ ಯಾವ ಸೇವೆಗೆ ಎಷ್ಟು ತೆರಿಗೆ, ಯಾವ ಸರಕಿಗೆ ಎಷ್ಟು ತೆರಿಗೆ ಅನ್ನುವುದು ನಿತ್ಯ ಒಂದೊಂದಾಗಿ ಅನುಭವಕ್ಕೆ ಬರುತ್ತಿದೆ. ಆದರೂ ಜನರಲ್ಲಿ ಬಗೆಹರಿಯದ ಗೊಂದಲ! ಇದನ್ನೇ ನಿರ್ದೇಶಕ ಯೋಗರಾಜ್ ಭಟ್ ಹಾಡಿನ ಮೂಲಕ ಪ್ರಸ್ತುತ ಪಡಿಸಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಮುಗುಳು ನಗೆ’ ಚಿತ್ರ ನಿರ್ಮಾಣದಲ್ಲಿರುವ ಯೋಗ್ರಾಜ್ ಭಟ್ ದೇಶದ ಬಹು ಚರ್ಚಿತ ವಿಷಯ ಜಿಎಸ್ಟಿ ಕುರಿತು ರಚಿಸಿರುವ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಿಎಸ್ಟಿಗೆ ಚಾಲನೆ ನೀಡಲಾದ (ಜು.1ರಂದು) ದಿನವೇ ಯುಟ್ಯೂಬ್ನಲ್ಲಿ ಹಾಡು ಬಿಡುಗಡೆ ಮಾಡಲಾಗಿದ್ದು, ಈವರೆಗೂ 2.2 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.
‘ಹೊಡಿ ಒಂಬತ್’ ಹಾಡಿಗೆ ವಿ ಹರಿಕೃಷ್ಣ ಸಂಗೀತ ನಿರ್ದೇಶನವಿದ್ದು, ಗಣೇಶ್, ದುನಿಯಾ ವಿಜಯ್ ಹಾಗೂ ಹರಿಕೃಷ್ಣ ಹಾಡಿದ್ದಾರೆ.
‘ಊಟಕೂ ಟ್ಯಾಕ್ಸ್, ವಾಂತಿಗೂ ಟ್ಯಾಕ್ಸ್, ಹುಟ್ಟು ಚಟ್ಟಕ್ಕೆ ತೆರಿಗೆ ಫಿಕ್ಸು ಹೊಡಿ ಒಂಬತ್...’ ಹೀಗೆ ಹಾಡು ಮುಂದುವರಿಯುತ್ತದೆ.