ಅಕ್ಕಿ ಸರಬರಾಜು: ಈ ತಿಂಗಳಲ್ಲಿ ತೀವ್ರ ಸಮಸ್ಯೆ– ಜಗಜೀವನ ರಾಂ
ನವದೆಹಲಿ, ಜುಲೈ 4– ಈ ತಿಂಗಳಲ್ಲಿ ಅಕ್ಕಿ ಸರಬರಾಜಿನಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸಮಸ್ಯೆ ಆಗಲಿದೆ ಎಂದು ಕೇಂದ್ರ ಆಹಾರ ಸಚಿವ ಶ್ರೀ ಜಗಜೀವನ ರಾಂ ದೇಶದ ಜನರಿಗೆ ಸೂಚನೆ ನೀಡಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಒರಿಸ್ಸಾದಿಂದ ಕಳಪೆ ಗುಣಮಟ್ಟದ ಅಕ್ಕಿಯನ್ನು ಮಾರಾಟ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಸಭಾ ಸದಸ್ಯ ಶ್ರೀ ಮಧು ಲಿಮಯೆ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಅವರು ಈ ಮಾಹಿತಿ ನೀಡಿದರು.
ಮಾವೊ ಮುದಿ ತತ್ವಜ್ಞಾನಿ!
ನವದೆಹಲಿ, ಜುಲೈ 3– ‘ಮಾವೊ ಒಬ್ಬ ಮುದಿ ಮನುಷ್ಯ, ಆತ ಬೋಧಿಸುವ ತತ್ವಜ್ಞಾನ ವಾಸ್ತವದಲ್ಲಿ ತತ್ವಜ್ಞಾನವೇ ಅಲ್ಲ’ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷದ ಅಧ್ಯಕ್ಷ ಎಸ್.ಎ. ಡಾಂಗೆ ಟೀಕಿಸಿದ್ದಾರೆ.
ಚೀನಾದ ಈ ಸರ್ವಾಧಿಕಾರಿಯ ವಿರುದ್ಧ ಲೋಕಸಭೆಯಲ್ಲಿಂದು ವಾಗ್ದಾಳಿ ಮಾಡಿದ ಡಾಂಗೆ, ‘ಮಾವೊ ತನ್ನನ್ನು ತಾನು ಪ್ರವಾದಿಯಂತೆ ಬಿಂಬಿಸಿ ‘ಕೆಂಪು ಪುಸ್ತಕ’ ಸೃಷ್ಟಿಸಿದ್ದಾನೆ’ ಎಂದರು.
ಹಾರಂಗಿ ಯೋಜನೆ: ಬುಧವಾರ ಉನ್ನತಮಟ್ಟದ ಸಭೆ
ಹೇಮಾವತಿ ಹಾಗೂ ಹಾರಂಗಿ ಜಲಾಶಯ ಯೋಜನೆಗಳಿಗೆ ತಾಂತ್ರಿಕ ಒಪ್ಪಿಗೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ದೆಹಲಿಯಲ್ಲಿ ಉನ್ನತಮಟ್ಟದ ಸಭೆ ನಡೆಯಲಿದೆ.
ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ, ಲೋಕೋಪಯೋಗಿ ಸಚಿವ ಶ್ರೀ ವೀರೇಂದ್ರ ಪಾಟೀಲ ಹಾಗೂ ವಿತ್ತ ಸಚಿವ ಶ್ರೀ ರಾಮಕೃಷ್ಣ ಹೆಗ್ಗಡೆ ಅವರು ಬುಧವಾರ ಮಧ್ಯಾಹ್ನ ವಿಮಾನದಲ್ಲಿ ದೆಹಲಿಗೆ ಹೋಗಲಿದ್ದಾರೆ.