ಉಡುಪಿ:‘ಚಿಣ್ಣರ ಸಂತರ್ಪಣೆ ಯೋಜನೆ ಮೂಲಕ ಗೌರವ ಶಿಕ್ಷಕರಿಗೆ ನೀಡುತ್ತಿರುವ ಸಂಬಳವನ್ನು ಹೆಚ್ಚಿಸುವ ಚಿಂತನೆ ಇದೆ‘ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಪರ್ಯಾಯ ಪೇಜಾವರ ಮಠ, ಶ್ರೀಕೃಷ್ಣ ಮಠ ಹಾಗೂ ಚಿಣ್ಣರ ಸಂತ ರ್ಪಣೆ ಶಾಲಾ ಒಕ್ಕೂಟ ರಾಜಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯ ಕ್ರಮದಲ್ಲಿ ಚಿಣ್ಣರ ಸಂತರ್ಪಣೆ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಿ ಮಾತನಾಡಿದರು.
‘ಚಿಣ್ಣರ ಸಂತರ್ಪಣೆ ಶಾಲೆಗಳ ಸೇವೆ ಒಂದು ಸಾಮಾಜಿಕ ಕಾರ್ಯವಾಗಿದ್ದು, ಪ್ರತಿ ಪರ್ಯಾಯದಲ್ಲಿಯೂ ಇಂತಹ ಕಾರ್ಯಕ್ರಗಳು ಹೆಚ್ಚಾಗಬೇಕು. ಎಲ್ಲ ಮಕ್ಕಳಲ್ಲಿ ಶ್ರೀಕೃಷ್ಣ ಇದ್ದಾನೆ, ಮಕ್ಕಳ ಸೇವೆ ಹಾಗೂ ಸಾಮಾಜಿಕ ಕೆಲಸಗಳಿಗೆ ಜನರು ಸಹ ಬೆಂಬಲ ನೀಡುತ್ತಾರೆ. ಚಿಣ್ಣರ ಸಂತರ್ಪಣೆ ಶಾಲೆಗಳ ಗೌರವ ಶಿಕ್ಷಕರ ಸಂಬಳ ಏರಿಕೆ ಮಾಡಬೇಕು ಎಂಬ ಬೇಡಿಕೆ ಇದ್ದು, ಈ ಬಗ್ಗೆ ಸಮಾ ಲೋಚಿಸಲಾಗುವುದು’ ಎಂದರು.
ಕಂಬಳ ನಾಡಿನ ಹಬ್ಬವಾಗಿದ್ದು ಅದರಲ್ಲಿ ಹಿಂಸಾಚಾರಕ್ಕೆ ಅವಕಾಶ ನೀಡಬಾರದು. ಕೇವಲ ಸ್ಪರ್ಧೆಯ ಕಾರಣಕ್ಕೆ ಅವುಗಳನ್ನು ಹಿಂಸಿಸಿ ಜನರಿಗೆ ಮಾನಸಿಕ ವೇದನೆಯಾಗುವಂತೆ ಮಾಡ ಬಾರದು. ಗೋ ಸಂಪತ್ತಿನ ವೃದ್ಧಿಯ ರೀತಿ ಯಲ್ಲಿಯೇ ಇದು ಸಹ ನಡೆಯಬೇಕು ಎಂದರು.
ಪೇಜಾವರ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಮಾತನಾಡಿ, ‘ಬೌದ್ಧಿಕ ಶಿಕ್ಷಣದ ಜೊತೆಗೆ ನೈತಿಕ ಹಾಗೂ ಸಾಂಸ್ಕೃತಿಕ ಶಿಕ್ಷಣವೂ ವಿದ್ಯಾರ್ಥಿಗಳಿಗೆ ಸಿಗಬೇಕು ಎಂದು ಮಠದ ಆಶಯವಾ ಗಿದೆ. ದೇವಸ್ಥಾನಗಳು ಜೀರ್ಣೋ ದ್ಧಾರಗೊಂಡು ಸದೃಢವಾಗುತ್ತಿರುವು ದನ್ನು ನಾವಿಂದು ಕಾಣುತ್ತಿದ್ದೇವೆ. ಅದೇ ರೀತಿ ಶಾಲೆಗಳನ್ನು ಸಹ ಅಭಿವೃದ್ಧಿಪಡಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಪ್ರಯತ್ನಿಸಬೇಕು‘ ಎಂದರು.
ಒಟ್ಟು 86 ಶಾಲೆಗಳಿಗೆ ಅನ್ನದ ರೂಪದಲ್ಲಿ ಶ್ರೀಕೃಷ್ಣ ಪ್ರಸಾದವನ್ನು ನೀಡಲಾಗುತ್ತಿದೆ. ಇದಕ್ಕೆ ಸರ್ಕಾರದ ಸಹಯೋಗದಲ್ಲಿ ಈ ಕಾರ್ಯ ನಡೆಯುತ್ತಿದೆ. ಮಠದಿಂದ ಉಚಿತ ಸಮವಸ್ತ್ರ, ಯೋಗ ಶಿಕ್ಷಕರಿಗೆ ಗೌರವ ಸಂಭಾವನೆ ಮತ್ತು ಕೆಲವು ಶಾಲೆಗಳಿಗೆ ಶೌಚಾಲಯ ಸಹ ನಿರ್ಮಿಸಿಕೊಡಲಾ ಗುತ್ತಿದೆ ಎಂದು ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ನಾಗೇಶ್ ಶಾನುಭಾಗ್ ಹೇಳಿದರು. ಚಿಣ್ಣರ ಸಂತರ್ಪಣೆ ಶಾಲಾ ಒಕ್ಕೂಟದ ಅಧ್ಯಕ್ಷ ಅಶೋಕ್ ಕುಮಾರ್ ಮಾಡ ಇದ್ದರು.
* *
ಶಾಲೆಯ ನಿರ್ವಹಣೆಯನ್ನು ಸಾರ್ವಜನಿಕರೇ ಮಾಡಿ ಶುಲ್ಕ ರಹಿತ ಶಿಕ್ಷಣ ನೀಡಬೇಕು.
ವಿಶ್ವಪ್ರಸನ್ನ ಸ್ವಾಮೀಜಿ
ಪೇಜಾವರ ಮಠ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.