ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಗೆ ಮಳೆ, ಮೊಗಕೆ ಕಳೆ...

Last Updated 6 ಜುಲೈ 2017, 19:30 IST
ಅಕ್ಷರ ಗಾತ್ರ

ಮಳೆಗಾಲದಲ್ಲಿ ಸೆಕೆಯೂ ಇರುತ್ತದೆ. ಮೋಡ ಕವಿದ ವಾತಾವರಣವಿದ್ದರೂ, ಉಷ್ಣಾಂಶಕ್ಕೇನೂ ಕೊರತೆ ಇರುವುದಿಲ್ಲ. ಆದರೆ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಚರ್ಮ ಒಣಗುವುದಿಲ್ಲ. ಬೆವರುವುದಿಲ್ಲ. ಪರಿಣಾಮವಾಗಿ ದೂಳು ಚರ್ಮದೊಳಗೆ ಅವಿತುಕೊಳ್ಳಲು ಸಾಕಷ್ಟು ಅವಕಾಶಗಳಿರುತ್ತವೆ.

ಮಳೆಗಾಲದಲ್ಲೂ ಮೊಡವೆ, ಗುಳ್ಳೆಗಳ ಕಾಟ ತಪ್ಪದು. ಆಗಾಗ ಫೇಸ್‌ಪ್ಯಾಕ್‌ ಬಳಸುವುದು ಇದಕ್ಕೊಂದು ಉತ್ತಮ ಪರಿಹಾರ. ಬಿಡುವಿದ್ದಾಗ ಟೊಮೆಟೊ ರಸದಿಂದ ಮುಖ ಸ್ವಚ್ಛಗೊಳಿಸಿಕೊಳ್ಳಿ. ಇದರಿಂದ ಮುಖದ ಮೇಲಿನ ಕಲೆಗಳೆಲ್ಲವೂ ತಿಳಿಯಾಗುತ್ತದೆ.

ಅಕ್ಕಿ ಹಿಟ್ಟು ಮತ್ತು ಸೌತೆಕಾಯಿ ಮಿಶ್ರಣದ ಫೇಸ್‌ಪ್ಯಾಕ್ ಸರ್ವ ಋತುಗಳಿಗೂ ಹೊಂದಿಕೆಯಾಗುತ್ತದೆ. ಸೌತೆಕಾಯಿಯನ್ನು ಕೋಸಂಬರಿಗೆ ಹೆಚ್ಚುವಂತೆ ಮಾಡಿ ರಸ ಸೋಸಿಕೊಳ್ಳಬೇಕು. ಸೋಸಿದ ರಸಕ್ಕೆ ಅಕ್ಕಿ ಹಿಟ್ಟು ಬೆರೆಸಿ ಪೇಸ್ಟ್‌ ಮಾಡಿಕೊಳ್ಳಬೇಕು. ಮುಖದ ಮೇಲೆ ತೆಳುವಾಗಿ ಲೇಪಿಸಿಕೊಂಡು, ಕಣ್ಣಿನ ಮೇಲೆ ಸೌತೆಕಾಯಿಯ ಚೂರನ್ನು15 ನಿಮಿಷ ಇರಿಸಿಕೊಳ್ಳಿ.

ಮುಖದ ಮೇಲಿನ ಲೇಪ ಒಣಗಿದಂತಾಗುವವರೆಗೂ ಮಾತಿಲ್ಲದೆ, ನಗುವಿಲ್ಲದೆ, ಆಕಳಿಕೆಯೂ ಇಲ್ಲದೇ ಧ್ಯಾನಸ್ಥ ಸ್ಥಿತಿಯಲ್ಲಿ ಏಕಾಗ್ರತೆಯಿಂದ ಇರಬೇಕು. ಲೇಪ ಒಣಗಿದಂತಾದಾಗ ತಣ್ಣೀರಿನಿಂದ ಮುಖ ತೊಳೆದುಕೊಳ್ಳಬೇಕು. ಮುಖದ ಮೇಲಿನ ತೆರೆದ ಚರ್ಮದ ರಂಧ್ರಗಳು ಮುಚ್ಚಿಕೊಳ್ಳುವವು. ಬೆಣ್ಣೆಯಂಥ ನುಣ್ಣಗಿನ ನುಣುಪಿನ ಕೆನ್ನೆ ನಿಮ್ಮದಾಗುವುದು.

ಚರ್ಮದ ಬಣ್ಣ ತಿಳಿಗೊಳಿಸುವ ಇನ್ನೊಂದು ಪ್ರಮುಖ ಅಂಶವೆಂದರೆ ಆಲೂಗಡ್ಡೆಯ ಮಸಾಜ್‌. ಆಲೂಗಡ್ಡೆಯನ್ನು ಕೊಬ್ಬರಿಯಂತೆ ತುರಿದುಕೊಂಡು ಅದರ ತಿರುಳನ್ನು ಮುಖದ ತುಂಬ ಉಜ್ಜಿಕೊಳ್ಳಬೇಕು. ನವಿರಾಗಿ ನೀವುತ್ತಲೇ ಮಸಾಜ್‌ ಮಾಡಿಕೊಳ್ಳಬೇಕು. ಆಲೂಗಡ್ಡೆಯ ತಿರುಳು ಒಣಗುವವರೆಗೂ ಈ ಮಸಾಜ್‌ ಮುಂದುವರಿಯಲಿ. ಅದು ಕೈಯಿಂದ ಒಣಗಿ ಉದುರುವಾಗ ಈ ವರ್ತುಲಾಕಾರವಾಗಿ ಮಾಡುತ್ತಿದ್ದ ಮಸಾಜ್‌ ಅನ್ನು ನಿಲ್ಲಿಸಬೇಕು. ಒಂದೆರಡು ನಿಮಿಷಗಳ ನಂತರ ಮುಖ ತೊಳೆದುಕೊಳ್ಳಬೇಕು. ಮಳೆಯಲ್ಲಿ ಮಿಂದೆದ್ದು ಬಂದ ಚೆಲುವೆಯಂತೆ ಕಾಣಲು ಈ ಸರಳ ಉಪಾಯಗಳು ಸಹಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT