ರಾಣೆಬೆನ್ನೂರು: ‘ಪ್ರಧಾನಿ ನರೇಂದ್ರ ಮೋದಿ ಅವರ ಆಲೋಚನೆ, ಗುರಿ ಮತ್ತು ತತ್ವ ನಮ್ಮ ದೇಶದ ಎಲ್ಲ ಪ್ರಧಾನಿಗಿಂತ ಭಿನ್ನವಾಗಿವೆ. ಇಡೀ ಪ್ರಪಂಚವೇ ಭಾರತದತ್ತ ನೋಡುವಂತೆ ಮಾಡಿದ್ದಾರೆ’ ಎಂದು ಶಿಕಾರಿಪುರ ಶಾಸಕ ಬಿ.ವೈ.ರಾಘವೇಂದ್ರ ಹೇಳಿದರು. ನಗರದಲ್ಲಿ ನಡೆದ ‘ಪಂಡಿತ ದೀನದಯಾಳ ಉಪಾಧ್ಯಾಯ ಜನ್ಮ ಶತಾಬ್ದಿ ವರ್ಷದ ವರ್ಷದ ವಿಸ್ತಾರಕರ ಸಭೆಯಲ್ಲಿ ಮಾತನಾಡಿದರು.
‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಶಕ್ತಿ ತುಂಬಬೇಕು. ಮತದಾರರ ಸಂಪರ್ಕ ಹೆಚ್ಚಾಗಬೇಕು’ ಎಂದು ರಾಘವೇಂದ್ರ ಆಗ್ರಹಿಸಿದರು. ‘ಕಾಂಗ್ರೆಸ್ ಆಡಳಿತದಿಂದ ಜನ ಬೇಸತ್ತಿದ್ದಾರೆ. ಮರಳಿನ ಕೊರತೆಯಿಂದ ಕೂಲಿ ಕಾರ್ಮಿಕರು ಬಂಡೆದಿದ್ದಾರೆ. ಬಡವರು ಮನೆ ಕಟ್ಟಲು ಆಗುತ್ತಿಲ್ಲ’ ಎಂದರು.
‘ವಿಮೆ ಯೋಜನೆ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆಯ ಅಕ್ಕಿಯು ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರದ ರಾಜ್ಯದ ಪಾಲಾಗುತ್ತಿವೆ’ ಎಂದು ದೂರಿದರು.
ಎಂಎಲ್ಎ ಅಭ್ಯರ್ಥಿ ಘೋಷಣೆಗೆ ಆಗ್ರಹ: ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಡಾ.ಮಾ.ನಾಗರಾಜ ಅವರು ವಿಸ್ತಾರಕರ ಕಾರ್ಯ ಕಲಾಪ ಬಗ್ಗೆ ಮಾತನಾಡುವಾಗ ಬಿಜೆಪಿ ಕಾರ್ಯಕರ್ತರು ಒಕ್ಕೊರಲಿನಿಂದ ರಾಣೆಬೆನ್ನೂರು ಎಂಎಲ್ಎ ಅಭ್ಯರ್ಥಿ ಯಾರು ಎಂದು ಎಂದು ಕೂಗಾಡಿದರು.
ಸಭೆ ಗೊಂದಲ ಗೂಡಾಗಿ ಪರಿಣಮಿಸಿದಾಗ ಶಾಸಕ ರಾಘವೇಂದ್ರ ಅವರು ಮೈಕು ಹಿಡಿದು ಕಾರ್ಯಕರ್ತರಲ್ಲಿ ಮನವಿ ಮಾಡಿ, ನೀವೆಲ್ಲ ಕಾರ್ಯಕರ್ತರು ಸೂಚಿದ ಅಭ್ಯರ್ಥಿಯನ್ನೇ ನಮ್ಮ ಪಕ್ಷದ ಮುಖಂಡರು ನಿಶ್ಚಯ ಮಾಡಲಿದ್ದಾರೆ. ಸದ್ಯ ಪಕ್ಷ ನೀಡಿದ ವಿಸ್ತಾರಕ ಕರ್ತವ್ಯವನ್ನು ಯಶಸ್ವಿಗೊಳಿಸಿ ಎಂದಾಗ ಸಭೆ ತಿಳಿಯಾಯಿತು.
ಮಾಜಿ ಸಚಿವ ಸಿ.ಎಂ.ಉದಾಸಿ, ವಿಶ್ವನಾಥ ಪಾಟೀಲ, ಲಿಂಗರಾಜ ಚಪ್ಪರದಹಳ್ಳಿ, ಚೋಳಪ್ಪ ಕಸವಾಳ, ಡಾ.ಬಸವರಾಜ ಕೇಲಗಾರ, ಬಿ.ಎನ್. ಪಾಟೀಲ, ಶಿವಾನಂದ ಸಾಲಗೇರಿ, ಉಮೇಶ ಹೊನ್ನಾಳಿ, ಜಿ.ಜಿ. ಹೊಟ್ಟಿಗೌಡ್ರ, ರಾಘವೇಂದ್ರ ಕುಲಕರ್ಣಿ, ಪ್ರಭಾವತಿ ತಿಳುವಳ್ಳಿ, ದೀಪಕ ಹರಪನಹಳ್ಳಿ, ಮಂಜುಳಾ ಹತ್ತಿ ಹಾಜರಿದ್ದರು.