ಕಡೂರು: ಸರ್ಕಾರ ಶ್ರೀಸಾಮಾನ್ಯನ ಪರವಾಗಿದೆಯೋ ಅಥವಾ ಬಂಡವಾಳ ಶಾಹಿಗಳ ಪರವಾಗಿದೆಯೋ ಎಂಬುದು ಮೊದಲು ಸ್ಪಷ್ಟವಾಗಬೇಕಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಆರ್. ಮಹೇಶ್ ಒಡೆಯರ್ ಅಭಿಪ್ರಾಯ ವ್ಯಕ್ತಪಡಿಸಿದರು.ಶುಕ್ರವಾರ ತಾಲ್ಲೂಕಿನ ಪಂಚನ ಹಳ್ಳಿಯ ಗೋಶಾಲೆ ಆವರಣದಲ್ಲಿ ಕೃಷಿ ಇಲಾಖೆ ಏರ್ಪಡಿಸಿದ್ದ ಸಮಗ್ರ ಕೃಷಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಬೆನ್ನೆಲುಬಾದ ರೈತರ ಮತ್ತು ಕೃಷಿ ಬಗ್ಗೆ ಸರ್ಕಾರದ ದ್ವಂದ್ವ ನಿಲುವುಗಳು ರೈತರ ಬದುಕನ್ನು ದುಸ್ತರ ಗೊಳಿಸುತ್ತಿವೆ. ವ್ಯಾಪಾರೀಕರಣದತ್ತ ಹೊರಳುತ್ತಿರುವ ಸರ್ಕಾರದ ಗಮನ ಕೃಷಿ ಕ್ಷೇತ್ರವನ್ನು ಕಡೆಗಣಿಸುತ್ತಿದೆ ಎಂಬ ಭಾವನೆ ಬರುತ್ತಿದೆ.
ಪ್ರಸ್ತುತ ರೈತರು ಕೃಷಿಯನ್ನೇ ಅವಲಂಬಿಸಿ ಬದುಕ ಬೇಕೋ ಬೇಡವೋ ಎಂಬ ಜಿಜ್ಞಾಸೆ ಆರಂಭವಾಗಿದೆ. ಅಸಂಘಟಿತ ರೈತರ ಬಗ್ಗೆ ಯೋಚಿಸಲು ಪುರುಸೊತ್ತಿಲ್ಲದ ಸರ್ಕಾರಗಳು ಮಹಾನಗರಗಳಲ್ಲಿ ವ್ಯಾಪಾ ರಿಗಳಿಗೆ ಎಕರೆಗಟ್ಟಲೆ ಜಾಗ ನೀಡುತ್ತವೆ. ಆದರೆ ಹಿಂದಿನಿಂದ ಉಳುಮೆ ಮಾಡುತ್ತಾ ಬಂದಿರುವ ರೈತರಿಗೆ ಬಗರ್ಹುಕುಂ ಸಾಗುವಳಿಯಲ್ಲಿ 2 ಎಕರೆ ಜಮೀನು ನೀಡಲು ವರ್ಷಗಟ್ಟಲೆ ಸತಾಯಿಸುತ್ತಿದೆ ಎಂದು ವಿಷಾದಿಸಿದರು.
ಬರ ಪರಿಸ್ಥಿತಿಯನ್ನು ಮನಗಂಡು ಮೋಡಬಿತ್ತನೆ ಮಾಡುವ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಮಾಡಿದೆ. ಸತತ ಬರಗಾಲಕ್ಕೆ ತುತ್ತಾಗಿರುವ ಈ ಪ್ರದೇಶ ದಲ್ಲಿಯೂ ಶೀಘ್ರ ಮೋಡಬಿತ್ತನೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಎಪಿಎಂಸಿ ಸದಸ್ಯ ಟಿ.ಕೆ.ಜಗದೀಶ್ ಮಾತನಾಡಿ, ‘ಸರ್ಕಾರ ರೈತರಿಗೆ ಸಬ್ಸಿಡಿ ನೀಡುವ ನೆಪದಲ್ಲಿ ಇಲಿ, ಅಳಿಲು ತಿನ್ನುವಂತಹ ಕಪ್ಪು ಪೈಪುಗಳಿಗೆ ಸಬ್ಸಿಡಿ ನೀಡಿ ಡ್ರಿಪ್ ಮಾಡಿ ಎನ್ನುತ್ತದೆ, ಆದರೆ ಬಾಳಿಕೆ ಹೆಚ್ಚು ಬರುವಂತಹ ಪಿವಿಸಿ ಪೈಪುಗಳಿಗೆ ಸಬ್ಸಿಡಿ ನೀಡುವುದಿಲ್ಲ. ಇದು ಸರಿಯಲ್ಲ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ರೈತರಿಗೆ ಉಪಯೋಗವಾಗುವಂತಹ ರೀತಿಯಲ್ಲಿ ಸಬ್ಸಿಡಿ ನೀಡಬೇಕು’ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲತಾ ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಪಿ.ಸಿ.ಪ್ರಸನ್ನ ಕೃಷಿ ಇಲಾಖೆ ಮಾಹಿತಿಗಳ ಮತ್ತು ಸಿರಿಧಾನ್ಯಗಳ ಕುರಿತು ಮಾಹಿತಿ ಕೈಪಿಡಿ ಬಿಡುಗಡೆ ಮಾಡಿದರು. ಎಪಿಎಂಸಿ ಅಧ್ಯಕ್ಷ ಆರ್.ಓಂಕಾರಪ್ಪ, ಆರ್ಟ್ ಆಫ್ ಲಿವಿಂಗ್ ಅಧಿಕಾರಿ ಮಹೇಶ್, ಪಂಚನಹಳ್ಳಿ ಪಾಪಣ್ಣ, ರೇಣುಕಮ್ಮ, ಮಹೇಶ್ವರಪ್ಪ, ಭೀಮಾನಾಯ್ಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.