ರೈತರು ಹೊಲಗದ್ದೆಗಳಿಂದ ಹೊರಡುತ್ತಿದ್ದಂತೆಯೇ ಜಿಂಕೆ ಮತ್ತು ಕೃಷ್ಣಮೃಗಗಳ ಹಿಂಡು ದಾಳಿ ನಡೆಸುತ್ತಿವೆ. ಹರವಿ, ಹರನಗಿರಿ, ವರ್ದಿ, ಕೂಡಲ ಸೇರಿದಂತೆ ವರದಾ ನದಿಯ ತಟದಲ್ಲಿರುವ ಹತ್ತಾರು ಗ್ರಾಮಗಳಲ್ಲಿ ಜಿಂಕೆ ಮತ್ತು ಕೃಷ್ಣಮೃಗಗಳ ಹಾವಳಿಯಿಂದ ರೈತ ಸಮೂಹ ಕಂಗಾಲಾಗಿದೆ. ಪೈರು ಉಳಿಸಿಕೊಳ್ಳಲು ರೈತರು ಹೆಣಗಾಡುತ್ತಿರುವ ಈ ಸಂದರ್ಭದಲ್ಲಿ ಈ ಪ್ರಾಣಿಗಳ ದಾಳಿಯಿಂದ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಪ್ರದೇಶದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಸಮಸ್ಯೆ ವಿಪರೀತವಾಗಿದೆ. ಪರಿಣಾಮ ಹಗಲು, ರಾತ್ರಿಯೆನ್ನದೇ ರೈತರು ಹೊಲ ಕಾಯುವಂತಾಗಿದೆ.