ಮೈಸೂರು: ನಗರದ ನಟನ ರಂಗಶಾಲೆಯು ಜುಲೈ 14ರಿಂದ 16ರ ವರೆಗೆ ರಂಗಕರ್ಮಿ ಕೆ.ವಿ.ಸುಬ್ಬಣ್ಣ ಸ್ಮರಣೆ ಮತ್ತು ಮೊದಲ ಬಾರಿಗೆ ಅಂತರರಾಷ್ಟ್ರೀಯ ನಾಟಕೋತ್ಸವ ಆಯೋಜಿಸಿದೆ.
ನಟನ ರಂಗಶಾಲೆಯ ರೂವಾರಿ ಮಂಡ್ಯ ರಮೇಶ್ ಜನ್ಮದಿನವೂ ಜುಲೈ 14. ಹುಟ್ಟಿದ ದಿನವನ್ನು ರಂಗ ಚಟುವಟಿಕೆಗಳ, ನಾಟಕಗಳ ಮೂಲಕ ಆಚರಿಸಿಕೊಳ್ಳುವ ಮೂಲಕ ಒಂದು ಕೌಟುಂಬಿಕ ಸಂತೋಷವನ್ನು ಇಡೀ ಸಮಾಜಕ್ಕೆ ಹಂಚುವ ಮತ್ತು ರಂಗಕಾಯಕದ ಮೂಲಕ ಜನ್ಮದಿನ ವನ್ನು ಅರ್ಥಪೂರ್ಣವಾಗಿಸುವ ಆಸೆ ನಟನ ಸಂಸ್ಥೆಯದ್ದು. ಎಲ್ಲ ನಾಟಕಗಳೂ ನಟನದಲ್ಲಿ ಪ್ರದರ್ಶನಗೊಳ್ಳಲಿವೆ.
14ರಂದು ಬೆಳಿಗ್ಗೆ 10 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ನಾಟಕೋತ್ಸವ ಉದ್ಘಾಟಿಸಲಿದ್ದಾರೆ. ರಂಗಕರ್ಮಿ ಪ್ರಸನ್ನ ಅಧ್ಯಕ್ಷತೆ ವಹಿಸಲಿದ್ದಾರೆ.
ರಂಗಾಯಣ ನಿರ್ದೇಶಕಿ ಭಾಗೀರಥಿಬಾಯಿ ಕದಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಎಂ.ಎಸ್.ಅರ್ಚನಾ, ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್, ಚಿಂತಕ ಜಿ.ಕೆ. ಗೋವಿಂದರಾವ್, ರಂಗಕರ್ಮಿಗಳಾದ ಡಿ.ಎಸ್.ಚೌಗಲೆ, ಕೆ.ವೈ. ನಾರಾಯಣ ಸ್ವಾಮಿ, ಕಲಾನಿರ್ದೇಶಕ ಶಶಿಧರ ಅಡಪ ಪಾಲ್ಗೊಳ್ಳಲಿದ್ದಾರೆ.
ಮೊದಲ ದಿನ ಬೆಳಿಗ್ಗೆ 11 ಹಾಗೂ ಮಧ್ಯಾಹ್ನ 12.30ಕ್ಕೆ ಜೈಪುರದ ಜವಾಹರ ಕಲಾಕೇಂದ್ರವು ‘ಡೈರಿ ಆಫ್ ಎ ಕಾಕ್ರೋಚ್’ ಮಕ್ಕಳ ನಾಟಕ ಪ್ರದರ್ಶನಗೊಳ್ಳಲಿದೆ. ಸಂಜೆ 6.30ಕ್ಕೆ ಡಾ.ಗುಬ್ಬಿ ವೀರಣ್ಣ 125ನೇ ವರ್ಷಾಚರಣೆಗಾಗಿ ನಟನ ರಂಗಶಾಲೆ ಸಿದ್ಧಗೊಳಿಸಿದ ತೋರಣಗಲ್ ರಾಜಾರಾಯ ವಿರಚಿತ ‘ಸುಭದ್ರಾ ಕಲ್ಯಾಣ’ ನಾಟಕ ಪ್ರದರ್ಶನವಿದೆ.
15ರಂದು ಬೆಳಿಗ್ಗೆ 11, ಮಧ್ಯಾಹ್ನ 12.30ಕ್ಕೆ ಇಂಗ್ಲೆಂಡಿನ ಫಿಂಗರ್ ಅಂಡ್ ಥಂಬ್ ತಂಡದ ‘ಸ್ಮಾಲ್ ಫೆಬಲ್ಸ್’ ಮಕ್ಕಳ ನಾಟಕ ಪ್ರದರ್ಶನಗೊಳ್ಳಲಿದೆ. ಸಂಜೆ 6.30ಕ್ಕೆ ಹಬೀಬ್ ತನ್ವೀರರ ‘ಚೋರ ಚರಣದಾಸ’, 16ರಂದು ಸಂಜೆ 6.30ಕ್ಕೆ ರವೀಂದ್ರನಾಥ ಟ್ಯಾಗೋರರ ‘ಕೆಂಪು ಕಣಗಿಲೆ’ ನಾಟಕ ಪ್ರದರ್ಶನ ಕಾಣಲಿದೆ. ಮೂರು ದಿನಗಳ ಕಾಲ ನಾಟಕೋತ್ಸವ ವಿವಿಧೆಡೆಯ ರಂಗಾಸಕ್ತರನ್ನು ಸೆಳೆಯಲಿದೆ.