ದಾವಣಗೆರೆ: ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿರುವ ಕರ್ತವ್ಯಲೋಪ ಮತ್ತು ಹಣ ದುರುಪಯೋಗ ಪ್ರಕರಣಗಳ ಬಗ್ಗೆ ಎರಡು ತಿಂಗಳ ಒಳಗಾಗಿ ವಿವರವಾದ ವರದಿ ನೀಡುವಂತೆ ಸದನದ ಲೆಕ್ಕಪರಿಶೋಧನಾ ಸಮಿತಿಯ ಅಧ್ಯಕ್ಷ ಶಾಸಕ ಸಾ.ರಾ.ಮಹೇಶ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸದನದ ಲೆಕ್ಕಪರಿಶೋಧನಾ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, 1994–95ನೇ ಸಾಲಿನಿಂದ 2016–17ನೇ ಸಾಲಿನವರೆಗೆ ಇತ್ಯರ್ಥಗೊಳ್ಳದ ಪ್ರಕರಣಗಳ ಬಗ್ಗೆ ವರದಿ ನೀಡುವಂತೆ ತಿಳಿಸಿದರು.
ಗಡುವಿನ ಒಳಗೆ ವರದಿ ನೀಡದಿದ್ದರೆ ಇದಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯನ್ನು ಹೊಣೆ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಇದಕ್ಕೂ ಮುನ್ನ ಅಧಿಕಾರಿಗಳು, ‘1994–95ನೇ ಸಾಲಿನಿಂದ 2016–17ನೇ ಸಾಲಿನವರೆ ಇತ್ಯರ್ಥಗೊಳ್ಳದ ಕರ್ತವ್ಯಲೋಪ ಮತ್ತು ಹಣ ದುರುಪಯೋಗದ 176 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಈ ಪ್ರಕರಣಗಳಲ್ಲಿ ಬಹುತೇಕ ಪಂಚಾಯತ್ ಇಲಾಖೆಗೆ ಸೇರಿವೆ ಎಂದು ತಿಳಿಸಿದರು.
ಕೆಲವು ಪ್ರಕರಣಗಳ ಮಾಹಿತಿ ಪಡೆದ ಸದನ ಸಮಿತಿ ಸದಸ್ಯರು, ಪ್ರಕರಣಗಳ ಗಂಭೀರತೆಯನ್ನು ತಿಳಿದು ಎಷ್ಟೊ ಪ್ರಕರಣಗಳಲ್ಲಿ ತಪ್ಪಿಸ್ಥರಿಗೆ ಇನ್ನೂ ಶಿಕ್ಷೆ ಆಗದಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು.
‘ಪ್ರಕರಣಗಳಲ್ಲಿ ಕೆಲವು ಅಧಿಕಾರಿಗಳ ತಪ್ಪು ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಇಂತಹ ಪ್ರಕರಣಗಳನ್ನು ಸರ್ಕಾರವೇ ಇತ್ಯರ್ಥಪಡಿಸಬೇಕಾಗಿದೆ. ನೀವು ವರದಿ ನೀಡಿದ ನಂತರ ಇದನ್ನು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದರು.
ಸಭೆಯಲ್ಲಿ ಸದನ ಸಮಿತಿ ಸದಸ್ಯರಾದ ಶಾಸಕ ಶಾಮನೂರು ಶಿವಶಂಕರಪ್ಪ, ಎಚ್.ವೈ.ಮೇಟಿ, ಡಿ.ಜಿ.ಶಾಂತನಗೌಡ, ಕೃಷ್ಣರೆಡ್ಡಿ, ಸಚಿವಾಲಯದ ನೂರ್ ಅಹ್ಮದ್ ಜಮಾದಾರ್, ಮಹಾ ಲೇಖಪಾಲರು, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಜಿ.ಎಸ್.ಷಡಕ್ಷರಪ್ಪ, ಮುಖ್ಯ ಲೆಕ್ಕಾಧಿಕಾರಿ ಟಿ.ಆಂಜನೇಯ ಉಪಸ್ಥಿತರಿದ್ದರು.