ಚನ್ನಗಿರಿ: ತಾಲ್ಲೂಕಿನ ಸಂತೇಬೆನ್ನೂರು ಗ್ರಾಮದ ಪರಿಶಿಷ್ಟ ಕಾಲೊನಿಯಲ್ಲಿ ಮದ್ಯದ ಅಂಗಡಿ ಹಾಗೂ ರೆಸ್ಟೋರೆಂಟ್ ತೆರೆಯಲು ಅಬಕಾರಿ ಇಲಾಖೆ ನೀಡಿರುವ ಅನುಮತಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಗ್ರಾಮದ ಮಹಿಳೆಯರು ಪಟ್ಟಣದ ತಾಲ್ಲೂಕು ಕಚೇರಿಯ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
‘ಜುಲೈ 14ರಂದು ಮದ್ಯದ ಅಂಗಡಿ ಪ್ರಾರಂಭಿಸಲು ಸಿದ್ಧತೆಗಳು ನಡೆದಿವೆ. ಇದಕ್ಕೆ ಇಲಾಖೆ ಅನುಮತಿ ನೀಡಿರುವುದು ಸರಿಯಲ್ಲ. ಇಲ್ಲಿ ಅಂಗಡಿ ತೆರೆದರೆ ಹೆಣ್ಣುಮಕ್ಕಳು, ಸಣ್ಣಮಕ್ಕಳು ಓಡಾಡುವುದು ಕಷ್ಟವಾಗುತ್ತದೆ. ಯಾವ ಮಾನದಂಡ ಇಟ್ಟುಕೊಂಡು ಪರಿಶಿಷ್ಟ ಕಾಲೊನಿಯಲ್ಲಿ ಮದ್ಯದ ಅಂಗಡಿ ತೆರೆಯಲು ಅನುಮತಿ ನೀಡಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಅನುಮತಿ ರದ್ದುಪಡಿಸಿ, ತೊಂದರೆ ತಪ್ಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು’ ಎಂದು ಈ ಗ್ರಾಮದ ಕಾಲೊನಿಯ ಎಚ್. ರೂಪಾ ಎಚ್ಚರಿಕೆ ನೀಡಿದರು. ನಂತರ ತಹಶೀಲ್ದಾರ್ ಎಸ್. ಪದ್ಮಕುಮಾರಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಪ್ರೇಮಾ, ರೇಣುಕಮ್ಮ, ನೇತ್ರಾವತಿ, ನಿರ್ಮಲಾ, ನಿಂಗಮ್ಮ, ಎಂ. ರಂಗಸ್ವಾಮಿ, ಎ.ಕೆ. ರಾಮಪ್ಪ, ಡಿಎಸ್ಎಸ್ ಸಂಚಾಲಕ ಕುಮಾರ್ ಹಿರೇಕೋಗಲೂರು, ಹಮ್ಜದ್ ಸಾಬ್ ವಹಿಸಿದ್ದರು.