ಕನಕಗಿರಿ: ‘ನವಣೆ ಸತ್ವಯುತ ಕಿರುಧಾನ್ಯ ಹಾಗೂ ಅಲ್ಪಾವಧಿ ಬೆಳೆಯಾಗಿದ್ದು, ಮಳೆಯಾಶ್ರಿತ ಪ್ರದೇಶಗಳಲ್ಲಿ ಇದನ್ನು ಸುಲಭವಾಗಿ ಬೆಳೆಯಬಹುದು’ ಎಂದು ಕೊಪ್ಪಳ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ವೀರೇಶ ಹುನಗುಂದ ಹೇಳಿದರು.
ಸಮೀಪದ ಬಂಡ್ರಾಳ ಗ್ರಾಮದಲ್ಲಿ ಮಂಗಳವಾರ ಕೃಷಿ ಇಲಾಖೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ನಡೆದ ಸಿರಿ ಧಾನ್ಯಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಡಿಮೆ ಆಳ, ಹೆಚ್ಚು ಫಲವತ್ತತೆ ಇಲ್ಲದ ಮಣ್ಣು ಹಾಗೂ ಬರಗಾಲದ ಸಂದರ್ಭದಲ್ಲೂ ನವಣೆ ಬೆಳೆಯನ್ನು ಚೆನ್ನಾಗಿ ಬೆಳೆಯಬಹುದು. ಸಿರಿಧಾನ್ಯಗಳ ಸೇವನೆಯಿಂದ ಆರೋಗ್ಯ ಸಮೃದ್ಧಿಯಾಗುವುದು. ಮಧುಮೇಹ, ರಕ್ತದೊತ್ತಡ ಕಾಯಿಲೆಗಳಿಂದ ದೂರವಿರಬಹುದು’ ಎಂದು ವಿವರಿಸಿದರು.
ಕೃಷಿ ವಿಸ್ತರಣಾ ಶಿಕ್ಷಣ ಅಧಿಕಾರಿ ಎಂ. ಬಿ. ಪಾಟೀಲ ಮಾತನಾಡಿ,‘ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಬೆಳೆಯುವ ಮುಖ್ಯ ತೃಣಧಾನ್ಯವಾದ ಸಾಮೆ ಎಂಬ ಸಿರಿಧಾನ್ಯವು ಹೆಂಗಸರಲ್ಲಿ ಅಂಡಾಶಾಯದ ತೊಂದರೆ ಮತ್ತು ಗಂಡಸರಲ್ಲಿ ವೀರ್ಯಾಣುಗಳ ಕೊರತೆ ನೀಗಿಸುತ್ತದೆ, ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಸಜ್ಜೆಯನ್ನು ಪ್ರಧಾನ ಬೆಳೆಯಾಗಿ ಬೆಳೆಯಲಾಗುತ್ತಿದೆ. ಸಜ್ಜೆಯಿಂದ ತಯಾರಿಸಿದ ರೊಟ್ಟಿ ಇಲ್ಲಿನ ಜನರ ಅಚ್ಚುಮೆಚ್ಚು.‘ಸಜ್ಜೆ ತಿಂದು, ಹೆಜ್ಜೆ ಹಾಕು’ ಎಂಬ ನಾಣ್ಣುಡಿ ಇರುವುದೇ ಇದಕ್ಕೆ ಸಾಕ್ಷಿ’ ಎಂದರು.
ಗಂಗಾವತಿ ಕೃಷಿ ಸಹಾಯಕ ನಿರ್ದೇಶಕ ಜಂಭಣ್ಣ ಐಲಿ ಅವರು ರಾಗಿ , ಜೋಳ, ಹಾರಕ, ಬರಗು ,ಉದಲು, ಕೊರಲೆ, ಸಾವೇ, ಇತರೆ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಭುವನೇಶ್ವರಪ್ಪ, ಯೋಜನಾಧಿಕಾರಿ ಶೇಖರಗೌಡ, ವಲಯದ ಮೇಲ್ವಿಚಾರಕ ರಾಜೇಸಾಬ, ಕೃಷಿ ಮೇಲ್ವಿಚಾರಕ ಮಹೇಶ ಇದ್ದರು.