ಬ್ರಹ್ಮಾವರ : ‘ವಿಶ್ವದಲ್ಲಿ ಮೀನು ಸಾಕಣೆ ಯಲ್ಲಿ ಚೀನಾ ಮೊದಲನೇ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ನಮ್ಮ ರೈತರು ಸಮಗ್ರ ಕೃಷಿಗಳನ್ನು ಕೈಗೊಂಡರೆ ಒಂದು ಕೃಷಿಯಲ್ಲಿ ನಷ್ಟ ಹೊಂದಿದರೂ ಮತ್ತೊಂದರಲ್ಲಿ ಲಾಭ ಗಳಿಸಬಹುದು’ ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ.ಧನಂಜಯ ತಿಳಿಸಿದರು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಮತ್ತು ಕೃಷಿ ಹೊಂಡಗಳಲ್ಲಿ ಮೀನು ಮರಿ ಸಾಕಣೆ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋಟದ ಮತ್ಸ್ಯೋದ್ಯಮಿ ಯೋಗೀಶ್ ಮಾತನಾಡಿ, ‘ಮೀನುಗಾರಿಕೆ ಬಗ್ಗೆ ಎಲ್ಲರಿಗೂ ತಿಳಿದಿದೆ. ಮೀನು ಕೃಷಿಕರಿಗೆ ಸರಿಯಾದ ಮಾರುಕಟ್ಟೆ ಸಿಗುತ್ತಿಲ್ಲ. ಮೀನಿನ ಬೆಲೆ ಧಾರಣೆ ಬಗ್ಗೆ ಮೊಬೈಲ್ ಆ್ಯಪ್ನಲ್ಲಿ ಸಹ ನೋಡಬಹುದು. ಮೀನು ಸಂಸ್ಕರಣಾ ಘಟಕಕ್ಕೂ ಸಹ ಬೆಳೆಸಿದಂತಹ ಮೀನನ್ನು ಮಾರಾಟ ಮಾಡಬಹುದು.
ಆದರೆ ಅಲ್ಲಿ ಮಾರಾಟ ಮಾಡಲು ಮೀನು ಬೆಳೆಸುವ ರೀತಿ ಮುಖ್ಯವಾಗುತ್ತದೆ. ಅಲ್ಲದೆ ನೀವು ಕೃಷಿ ಮಿತ್ರರ ಸಂಪರ್ಕ ಜಾಲವನ್ನು ಸಹ ಇಟ್ಟುಕೊಂಡು ಹೊಸ ತಂತ್ರಜ್ಞಾನವನ್ನು ಬಳಸಿ ಹೆಚ್ಚಿನ ಲಾಭವನ್ನು ಮೀನುಕೃಷಿಯಲ್ಲಿ ಪಡೆಯಬಹುದು’ ಎಂದು ತಿಳಿಸಿದರು. ಜಿಲ್ಲಾ ಮೀನುಗಾರಿಕಾ ಉಪನಿರ್ದೇಶಕ ಪಿ.ಪಾರ್ಶ್ವನಾಥ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಿಷಯ ತಜ್ಞ ಶ್ರೀನಿವಾಸ್ ಹೆಚ್.ಹುಲಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಮಹಾವಿದ್ಯಾನಿಲಯದ ಪ್ರಭಾರ ಪ್ರಾಂಶುಪಾಲ ಡಾ.ವಿನೋದ್, ಮೀನುಗಾರಿಕಾ ಸಹಾಯಕ ನಿರ್ದೇಶಕ ಶಿವಕುಮರ್ ಜಿ.ಎಂ., ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಎಂ.ಶಂಕರ್ , ರಾಜಣ್ಣ , ಡಾ.ಎನ್.ಈ.ನವೀನ್ ಇದ್ದರು.