ದೇವನಹಳ್ಳಿ: ಈ ವಿಧಾನಸಭಾ ವ್ಯಾಪ್ತಿಯ 15 ಸಾವಿರ ಅರ್ಹ ಕಡುಬಡವರಿಗೆ ಕೇಂದ್ರ ಸರ್ಕಾರದ ಉಜ್ವಲ್ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್ ಶೀಘ್ರ ವಿತರಣೆಯಾಗಲಿದೆ ಎಂದು ಹೆಬ್ಬಾಳ ಕ್ಷೇತ್ರ ಶಾಸಕ ವೈ.ಎ. ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಉಗನವಾಡಿ ಗ್ರಾಮದ ದಲಿತ ಮುನಿಯಪ್ಪ ಅವರ ಮನೆಯಲ್ಲಿ ರಾತ್ರಿ ವಾಸ್ತವ್ಯದ ನಂತರ ಮಂಗಳವಾರ ವಿಸ್ತಾರಕರಿಂದ ಪ್ರಚಾರಕ್ಕೆ ಚಾಲನೆ ನೀಡಿದರು.
‘ದೇವನಹಳ್ಳಿ ಕ್ಷೇತ್ರದಲ್ಲಿ 7 ಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ 100 ವಿಸ್ತಾರಕರನ್ನು ಬೂತ್ ಮಟ್ಟದಲ್ಲಿ ನೇಮಿಸಲಾಗಿದೆ. ವಿಸ್ತಾರಕರ ನೇಮಕವು ಬಿಜೆಪಿ ಬಲಪಡಿಸುವ ಮಹತ್ವಾಕಾಂಕ್ಷಿ ಯೋಜನೆ’ ಎಂದರು.
ಫಲಾನುಭವಿಗಳು ಕೇವಲ ₹ 300 ಠೇವಣಿ ಹಣ ನೀಡಿದರೆ ಸಾಕು. ಸಿಲಿಂಡರ್ ಮತ್ತು ಸ್ಟೌವ್ ಸಿಗಲಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ ಅನ್ನ ಭಾಗ್ಯ ಯೋಜನೆಯಡಿ ಪ್ರತಿ ಕೆ.ಜಿ ಗೆ ₹ 29 ನೀಡುತ್ತಿದೆ. ರಾಜ್ಯ ಸರ್ಕಾರ ₹ 3 ಮಾತ್ರ ನೀಡಿ ಕಾಂಗ್ರೆಸ್ ಸರ್ಕಾರದ ಅನ್ನ ಭಾಗ್ಯ ಯೋಜನೆ ಎಂದು ಬಿಂಬಿಸುತ್ತಿದೆ’ ಎಂದು ದೂರಿದರು.
‘ಸರ್ಕಾರ ಆರಂಭದಲ್ಲಿ 30 ಕೆಜಿ, ನಂತರ 7 ಕೆಜಿ ವಿತರಿಸುತ್ತಿತ್ತು. ಪ್ರಸ್ತುತ 3 ಕೆಜಿ ಅಕ್ಕಿ ವಿತರಿಸುತ್ತಿದೆ. ಇದರಲ್ಲಿ ಸಾಕಷ್ಟು ದುರುಪಯೋಗವಾಗುತ್ತಿದೆ. ಕೇಂದ್ರದ ಕೃಷಿ ಸಂಚಯ, ಬಿಮಾ ಫಸಲ್, ಬಾಣಂತಿಯರಿಗೆ ಪಾಲನೆ ಭತ್ಯೆಯಂತಹ ಉತ್ತಮ ಯೋಜನೆ ಜಾರಿಗೆ ತಂದಿದೆ’ ಎಂದರು.
ಬಿಜೆಪಿ ರಾಜ್ಯ ಖಜಾಂಚಿ ಹಾಗೂ ಜಿಲ್ಲಾ ಉಸ್ತುವಾರಿ ಸುಬ್ಬಣ್ಣ, ದೇವನಹಳ್ಳಿ ಸಹ ಉಸ್ತುವಾರಿ ಪಿ.ಎಂ. ರಘುನಾಥ್, ಕುಂದಾಣ ಶಕ್ತಿ ಕೇಂದ್ರ ವಿಸ್ತಾರಕ ಡಿ.ಆರ್.ನಾರಾಯಣಸ್ವಾಮಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಚ್.ಎಂ. ರವಿಕುಮಾರ್ ಹಾಜರಿದ್ದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ. ರಾಜಣ್ಣ, ಬಿಜೆಪಿ ರಾಜ್ಯ ಪರಿಷದ್ ಸದಸ್ಯ ದೇಸು ನಾಗರಾಜ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ನಾಗರಾಜ್ ಗೌಡ, ಪ್ರಧಾನ ಕಾರ್ಯದರ್ಶಿ ಸೊಣ್ಣೆಗೌಡ ಇದ್ದರು.