ಕುಕನೂರು: ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಿರುವ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹೊಬಳಿಯ ಯರೇಹಂಚಿನಾಳ, ಮಸಬಹಂಚಿನಾಳ, ರಾಜೂರು, ಸಿದ್ನೇಕೊಪ್ಪ, ಸೋಂಪುರ ಗ್ರಾಮದಲ್ಲಿ ರೈತರು ಹೆಸರು ಬಿತ್ತನೆ ಮಾಡಿದ್ದಾರೆ.
ಹೆಸರು ಬೆಳೆಗೆ ಹಳದಿ ರೋಗ ಕಂಡು ಬಂದಿರುವುದರಿಂದ ಇಳುವರಿ ಕಡಿಮೆ ಆಗುವ ಸಾಧ್ಯತೆ ಇದೆ. ಮಳೆ ಕೊರತೆಯಿಂದ ಅಲ್ಪಸ್ವಲ್ಪ ಇರುವ ಬೆಳೆಯೂ ಒಣಗುತ್ತಿರುವುದು ರೈತರ ಆತಂಕವನ್ನು ಹೆಚ್ಚಿಸಿದೆ.
‘ಸಕಾಲಕ್ಕೆ ಮಳೆ ಸುರಿಯದ ಕಾರಣ ಟ್ಯಾಂಕರ್ ಮೂಲಕ ನೀರು ಹಾಯಿಸಿದ್ದೆವು. ಈಗ ಹಳದಿ ರೋಗ ಗಂಟು ಬಿದ್ದಿದೆ’ ಎಂದು ರಾಜೂರ ಗ್ರಾಮದ ರೈತ ಶಿವುಕುಮಾರ ಹಿರೇಮಠ ಹೇಳಿದರು.
ಸರ್ಕಾರ ಹೆಸರು ಬೆಳೆದಿರುವ ರೈತರಿಗೆ ಪರಿಹಾರ ನೀಡಬೇಕು. ಕೃಷಿ ಇಲಾಖೆಯಿಂದ ಸಮೀಕ್ಷೆ ನಡೆಸಿ ಪರಿಹಾರಕ್ಕೆ ರೈತರನ್ನು ಗುರುತಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.
‘ಹೆಸರು ಬೆಳೆಯಲ್ಲಿ ಹಳದಿ ರೋಗ ಕಂಡು ಬಂದರೆ ತಕ್ಷಣ ಅಂತಹ ಗಿಡಗಳನ್ನು ಕಿತ್ತು ಹಾಕಬೇಕು. ಹೋಬಳಿ ಮಟ್ಟದ ಕೃಷಿ ಅಧಿಕಾರಿಗಳನ್ನು ಸಂರ್ಪಕಿಸಿ ಅವರು ಶಿಫಾರಸು ಮಾಡುವ ಔಷಧಿಗಳನ್ನು ಉಪಯೋಗಿಸಿ ರೋಗ ನಿಯಂತ್ರಿಸಬೇಕು. ಕಾನ್ಪಿಡಾರ್ ಅಥವಾ ಇಮಿಡಾ ಕ್ರಿಮಿನಾಶಕ ಸಿಂಪರಣೆ ಮಾಡಬೇಕು’ ಎಂದು ತಾಲ್ಲೂಕ ಕೃಷಿ ಅಧಿಕಾರಿ ಹಾರೋನ ರಾಶೀದ ಹೇಳಿದರು.