ಉಡುಪಿ: ರಕ್ತವನ್ನು ಆಸ್ಪತ್ರೆಗಳಲ್ಲಿ ಸಂಗ್ರಹಿಸುವುದಕ್ಕಿಂತ ರೋಗಿಗಳಿಗೆ ಅಗತ್ಯವಿದಾಗ ತಕ್ಷಣ ಸಿಗುವಂತೆ ಮಾಡುವುದು ಉತ್ತಮ ಕ್ರಮ ಎಂದು ಉಡುಪಿ ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಮಧುಸೂದನ್ ನಾಯಕ್ ಹೇಳಿದರು.
ಉಡುಪಿ ನಾಗರಿಕ ಸೇವಾ ಸಮಿತಿಯು ಜೋಸ್ ಅಲುಕಾಸ್ ಚಿನ್ನಾಭರಣ ಮಳಿಗೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ನಿತ್ಯ ರಕ್ತ ಸ್ಪಂದನೆ’ ರಕ್ತದಾನಿಗಳ ಸಂಘಟನೆಯನ್ನು ಉದ್ಘಾಟಿಸಿ ಮಾತನಾಡಿದರು.
ಒಂದು ಬಾರಿ ದಾನಿಗಳಿಂದ ರಕ್ತವನ್ನು ಪಡೆದರೇ ಅದನ್ನು 30ದಿನಗಳವರೆಗೆ ಮಾತ್ರ ಕಾಪಾಡಬಹುದಾಗಿದೆ. ತದನಂತರ ಇದರಿಂದ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ರಕ್ತದಾನಿಗಳಿಂದ ಅಗತ್ಯಕ್ಕೆ ತಕ್ಕಂತೆ ರಕ್ತ ಪಡೆಯುವುದು ಸೂಕ್ತ ಎಂದರು.
ರಕ್ತದಾನ ಶಿಬಿರಗಳಿಂದ ಸಂಗ್ರಹಿಸಿದ ರಕ್ತ ಕೆಲವೊಮ್ಮೆ ವ್ಯರ್ಥವಾಗುತ್ತದೆ, ಶಿಬಿರವನ್ನೇ ನಡೆಸದಿದ್ದರೆ ಕೊರತೆಯೂ ಆಗಲಿದೆ. ಈ ಸಮಸ್ಯೆಯನ್ನು ಪರಿಹರಿಸುವುದಕ್ಕೆ ರಕ್ತದಾನಿಗಳ ಗುಂಪನ್ನು ರಚಿಸಿದರೆ ಅಗತ್ಯವಿರುವಾಗ ರಕ್ತ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ವ್ಯವಸ್ಥಾಪಕಿ ರತ್ನಾ ಎಸ್.ಬಂಗೇರ, ಉದ್ಯಮಿ ರಾಘವೇಂದ್ರ ಕಿಣಿ, ಅಲುಕಾಸ್ ಸಂಸ್ಥೆಯ ವ್ಯವಸ್ಥಾಪಕ ಫ್ರೆಡ್ ಅಂಟೋನಿ, ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು , ತೃಷಾ ಇದ್ದರು.
***
ಜಿಲ್ಲಾಸ್ಪತ್ರೆಯಲ್ಲಿ ರಕ್ತದ ಕೊರತೆಯನ್ನು ಗಮನಿಸಿ, ರಕ್ತದಾನಿಗಳ ಪಟ್ಟಿ ತಯಾರಿಸಲಾಗಿದೆ. ಅಗತ್ಯ ಇರುವವರು ನಿತ್ಯ ರಕ್ತ ಸ್ಪಂದನೆ ಗುಂಪಿನ ಮೂಲಕ ಪಡೆಯಬಹುದು. ನಿತ್ಯಾನಂದ ಒಳಕಾಡು, ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ