ಉಡುಪಿ: ‘ನರ್ಮ್ ಬಸ್ ಗೊಂದಲ ನಿರ್ಮಾಣವಾಗಲು ಸಚಿವ ಪ್ರಮೋದ್ ಮಧ್ವರಾಜ್ ಅವರೇ ಕಾರಣ. ಈ ವಿಷಯದಲ್ಲಿ ಬಿಜೆಪಿ ನಾಯಕರ ಮೇಲೆ ಆರೋಪ ಮಾಡುವುದನ್ನು ಅವರು ಬಿಡಬೇಕು’ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ತಿರುಗೇಟು ನೀಡಿದರು.
‘ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್, ಶಾಸಕ ಅಭಯಚಂದ್ರ ಜೈನ್ ಅವರ ನೇತೃತ್ವದಲ್ಲಿ ಬಸ್ ಮಾಲೀಕರ ನಿಯೋಗ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ ಸರ್ಕಾರಿ ಬಸ್ ಬೇಡ ಎಂದು ಮನವಿ ಮಾಡಿದೆ.
ಬಸ್ ಮಾಲೀಕರಲ್ಲಿ ಶೇ 90ರಷ್ಟು ಮಂದಿ ಕಾಂಗ್ರೆಸ್ ಮುಖಂಡರೇ ಇದ್ದಾರೆ. ನರ್ಮ್ ಬಸ್ ಸೇವೆ ಆರಂಭಿಸಿದೆ ಎಂದು ತೋರಿಸಿಕೊಂಡ ಪ್ರಮೋದ್ ಅವರೇ ಆ ಬಸ್ಗಳು ಸ್ಥಗಿತಗೊಳ್ಳಲು ಕಾರಣರಾಗಿದ್ದಾರೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು.
‘ನಾವು ಸರ್ಕಾರಿ ಬಸ್ ಅನ್ನು ವಿರೋಧಿಸುವುದಿಲ್ಲ, ಮಣಿಪಾಲ–ಮಂಗಳೂರು ವೋಲ್ವೊ ಬಸ್ ಸೇವೆಯನ್ನು ನಾವೇ ಆರಂಭಿಸಿದ್ದೆವು. ಆದರೆ ಖಾಸಗಿ ಅವರೊಂದಿಗೆ ಸೌಹಾರ್ದದಿಂದ ಸಮಸ್ಯೆ ಬಹೆಹರಿಸಿಕೊಂಡಿದ್ದೆವು. ಈಗ ನರ್ಮ್ ಬಸ್ಗಗಳಿಗೆ ಪರವಾನಗಿ ನೀಡುವಾಗ ಜಿಲ್ಲಾಡಳಿತ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ.
ಈಗಲೂ ಯಾವ ಊರುಗಳಿಗೆ ಬಸ್ ಹೋಗುತ್ತಿಲ್ಲ ಎಂಬುದನ್ನು ತಿಳಿದುಕೊಂಡು ಅಂತಹ ಸ್ಥಳಗಳಿಗೆ ಬಸ್ ಹಾಕಿದರೆ ಜನರಿಗೆ ಅನುಕೂಲವಾಗಲಿದೆ’ ಎಂದರು.
‘ನರ್ಮ್ ಬಸ್ ವಿಷಯದಲ್ಲಿ ಪ್ರಮೋದ್ ಅವರು ವಿನಾಕಾರಣ ಬಿಜೆಪಿ ಮುಖಂಡರ ಮೇಲೆ ಆರೋಪ ಮಾಡುವುದನ್ನು ಬಿಡಬೇಕು. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದವರು ಯಾರು ಎಂದು ನೋಡಿದರೆ ನರ್ಮ್ ಬಸ್ಗೆ ತಡೆಯಾಜ್ಞೆ ತಂದವರು ಯಾರು ಎಂಬುದು ಗೊತ್ತಾಗುತ್ತದೆ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.