ಬಾಗಲಕೋಟೆ: ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಿರುಹಣಕಾಸು ಯೋಜನೆಯಡಿ ಫಲಾನುಭವಿಗಳಿಂದ ಸಾಲ ವಸೂಲಿ ಮಾಡುವಾಗ ಸಂಯಮ ವಹಿಸುವಂತೆ ಕಾರ್ಯ ಕರ್ತರಿಗೆ ಸೂಚನೆ ನೀಡುವುದಾಗಿ’ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವ ಕಾರಣ ಒತ್ತಾಯವಾಗಿ ಸಾಲ ವಸೂಲಾತಿ ಮಾಡುವ ಪ್ರಶ್ನೆ ಇಲ್ಲ. ಫಲಾನುಭವಿಗಳಲ್ಲಿ ಜಾಗೃತಿ ಹಾಗೂ ಹೊಂದಾಣಿಕೆ ಮೂಲಕ ಅವರ ಮನವೊಲಿಸಲಾಗುವುದು ಎಂದರು.
ಈ ವರ್ಷ ಜಿಲ್ಲೆಯಲ್ಲಿ 1500 ನಿರುದ್ಯೋಗಿ ಯುವಕ–ಯುವತಿಯರನ್ನು ಗುರುತಿಸಿ ಬೇರೆ ಬೇರೆ ಸ್ವ–ಉದ್ಯೋಗಕ್ಕೆ ಸಂಬಂಧಪಟ್ಟ ತರಬೇತಿಯನ್ನು ನೀಡಿ ಸ್ವಾವಲಂಬನೆ ಬದುಕಿಗೆ ಪ್ರೇರಣೆ ನೀಡಲಾಗುವುದು.
ಪರಿಸರ ಸಂರಕ್ಷಣೆಯಡಿ 50 ಸಾವಿರ ಬೀಜದುಂಡೆ ಬಿತ್ತನೆ, 5 ಸಾವಿರ ಅರಣ್ಯ ಸಸಿಗಳ ನಾಟಿ ಮತ್ತು ಪರಿಸರ ಜಾಗೃತಿ ಮಾಹಿತಿ, ಜಾಥಾ ಕಾರ್ಯಕ್ರಮಗಳನ್ನು ಶಾಲೆ, ದೇವಸ್ಥಾನ, ಕೆರೆ ಅಭಿವೃದ್ಧಿ ಸಮಿತಿ ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು,
ಐದು ತಾಲ್ಲೂಕುಗಳಲ್ಲಿ ಐದು ಮದ್ಯವರ್ಜನ ಶಿಬಿರ ನಡೆಸಿ 300 ಮಂದಿ ಮದ್ಯವ್ಯಸನಿಗಳ ಮನಃ ಪರಿವರ್ತನೆ ಮಾಡಲಾಗುವುದು. ಆಗಸ್ಟ್ 15ರಂದು 200 ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ 5000 ಶೌಚಾಲಯಗಳ ನಿರ್ಮಾಣಕ್ಕೆ ಪ್ರೇರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡುವುದಾಗಿ ಹೆಗ್ಗಡೆ ಹೇಳಿದರು.