ಇಸ್ಲಾಮಾಬಾದ್: ಪಾಕಿಸ್ತಾನದ ನ್ಯಾಯಾಲಯದಿಂದ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಲು ಅವರ ತಾಯಿಯ ವೀಸಾ ಅರ್ಜಿಯನ್ನು ಪರಿಗಣಿಸುವುದಾಗಿ ಪಾಕಿಸ್ತಾನ ಹೇಳಿದೆ.
ಅವಂತಿಕಾ ಜಾಧವ್ ಅವರ ಪುತ್ರನನ್ನು ಭೇಟಿಯಾಗಲು ಅವಕಾಶ ಕಲ್ಪಿಸುವಂತೆ ಭಾರತ ಪಾಕಿಸ್ತಾನಕ್ಕೆ ಮನವಿ ಮಾಡಿತ್ತು.
‘ಕುಲಭೂಷಣ್ ಜಾಧವ್ ಅವರ ತಾಯಿಗೆ ವೀಸಾ ನೀಡುವ ಕುರಿತ ಭಾರತದ ಮನವಿಯನ್ನು ಪಾಕಿಸ್ತಾನ ಪರಿಗಣಿಸುತ್ತಿದೆ’ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರ ನಫೀಸ್ ಜಕ್ರಿಯಾ ಹೇಳಿದ್ದಾರೆಂದು ಪಾಕಿಸ್ತಾನದ ರೇಡಿಯೊ ಹೇಳಿದೆ.
ಕುಲಭೂಷಣ್ ಜಾಧವ್ ಅವರ ತಾಯಿಗೆ ಪಾಕಿಸ್ತಾನ ವೀಸಾ ನೀಡುವಂತೆ ತಾವೇ ಖುದ್ದಾಗಿ ಪತ್ರ ಬರೆದಿದ್ದರೂ ಪಾಕಿಸ್ತಾನ ವಿದೇಶಾಂಗ ಸಚಿವ ಸರ್ತಾಜ್ ಅಜೀಜ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ದೆಹಲಿಯಲ್ಲಿ ಹೇಳಿದ್ದರು.
**
ಪಾಕ್ ನಿಲುವು ಬದಲಿಲ್ಲ, (ನವದೆಹಲಿ ವರದಿ): ಕುಲಭೂಷಣ್ ಜಾಧವ್ ಅವರಿಗೆ ರಾಜತಾಂತ್ರಿಕ ಸಂಪರ್ಕ ಒದಗಿಸುವಲ್ಲಿ ಪಾಕಿಸ್ತಾನದ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಭಾರತ ಹೇಳಿದೆ.
‘ಜಾಧವ್ ಪ್ರಕರಣ ಅಂತರ ರಾಷ್ಟ್ರೀಯ ನ್ಯಾಯಾಲಯದ ಮುಂದೆ ಇದೆ’ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಗೋಪಾಲ ಬಾಗ್ಲೆ ಹೇಳಿದ್ದಾರೆ. ಜಾಧವ್ ಅವರಿಗೆ ರಾಜತಾಂತ್ರಿಕ ಸಂಪರ್ಕ ಒದಗಿಸಲು ಭಾರತ ಸಲ್ಲಿಸಿದ 16 ಮನವಿಗಳನ್ನು ಪಾಕಿಸ್ತಾನ ತಳ್ಳಿಹಾಕಿದೆ.