ಬೆಂಕಿ ದುರಂತ: 11 ಭಾರತೀಯರ ಸಾವು
ಜೆಡ್ಡಾ/ನವದೆಹಲಿ: ದಕ್ಷಿಣ ಸೌದಿಯ ನಜರನ್ ನಗರದಲ್ಲಿ ಗುರುವಾರ ಸಂಭವಿಸಿದ ಬೆಂಕಿ ದುರಂತದಲ್ಲಿ 11 ಜನ ಭಾರತೀಯರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.
ದುರಂತದಲ್ಲಿ ಮೃತಪಟ್ಟ ಮತ್ತು ಗಾಯಗೊಂಡವರ ಕುಟುಂಬಗಳಿಗೆ ಜೆಡ್ಡಾದಲ್ಲಿರುವ ಭಾರತ ಕಾನ್ಸಲೇಟ್ ಕಚೇರಿಯಿಂದ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿವೆ.
‘ದುರಂತದ ಬಗ್ಗೆ ಮಾಹಿತಿ ಇದೆ. ಈ ಸಂಬಂಧ ಭಾರತದ ಕಾನ್ಸಲೇಟ್ ಕಚೇರಿ ಜತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ನಮ್ಮ ಕಾನ್ಸಲ್ ಜನರಲ್ ಅವರೂ ನಜರನ್ ಗವರ್ನರ್ ಜತೆ ಮಾತನಾಡಿದ್ದಾರೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
***
ರಾಜೀನಾಮೆ ನೀಡಲ್ಲ: ಷರೀಫ್
ಇಸ್ಲಾಮಾಬಾದ್: ‘ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ’ ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ತಿಳಿಸಿದ್ದಾರೆ.
ಪನಾಮ ಪೇಪರ್ಸ್ ಪ್ರಕರಣದ ತನಿಖೆ ನಡೆಸಿದ ಜಂಟಿ ತನಿಖಾ ಸಮಿತಿ ಷರೀಫ್ ವಿರುದ್ಧ ಭ್ರಷ್ಟಾಚಾರದ ದೂರು ದಾಖಲಿಸುವಂತೆ ಶಿಫಾರಸು ಮಾಡಿರುವ ಕಾರಣ ಅವರು ರಾಜೀನಾಮೆ ನೀಡಬೇಕು ಎಂಬ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಆದರೆ, ಷರೀಫ್ ಈ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ.
ಸಚಿವ ಸಂಪುಟದ ತುರ್ತು ಸಭೆಯ ನಂತರ ಮಾತನಾಡಿದ ಷರೀಫ್, ಜಂಟಿ ತನಿಖಾ ಸಮಿತಿ ಊಹಾಪೋಹಗಳ ಮೇಲೆ ವರದಿ ನೀಡಿರುವುದಾಗಿ ಅವರು ಟೀಕಿಸಿದರು ಎಂದು ‘ದಿ ಡಾನ್’ ವರದಿ ಮಾಡಿದೆ.
***
ಟ್ರಂಪ್ ವಿರುದ್ಧ ವಾಗ್ದಂಡನೆ ನಿರ್ಣಯ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ತೆಗೆದು ಹಾಕುವ ಸಂಬಂಧ ಮೊದಲ ಬಾರಿಗೆ ಅವರ ವಿರುದ್ಧ ವಾಗ್ದಂಡನೆ ನಿರ್ಣಯವನ್ನು ಮಂಡಿಸಲಾಗಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ನಡೆಸಿದೆ ಎನ್ನಲಾದ ಹಸ್ತಕ್ಷೇಪ ಕುರಿತ ತನಿಖೆಗೆ ಟ್ರಂಪ್ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿರುವ ಡೆಮಾಕ್ರಟಿಕ್ ಸಂಸದ ಬ್ರಾಡ್ ಶೆರ್ಮನ್ ಈ ನಿರ್ಣಯ ಮಂಡಿಸಿದ್ದಾರೆ.
***
‘ಬ್ರೆಕ್ಸಿಟ್’ಗಾಗಿ ಮಸೂದೆ
ಲಂಡನ್: ಐರೋಪ್ಯ ಒಕ್ಕೂಟದಿಂದ ಹೊರಬರುವ ಸಂಬಂಧ ಬ್ರಿಟನ್ ಮಸೂದೆ ರೂಪಿಸಿದ್ದು, ಇದಕ್ಕೆ ಸಂಸತ್ತು ಅನುಮೋದನೆ ನೀಡಬೇಕಿದೆ.
ಇದಕ್ಕೆ ಅನುಮೋದನೆ ಪಡೆಯುವುದು ಪ್ರಧಾನಿ ತೆರೆಸಾ ಮೇ ಅವರ ಭವಿಷ್ಯದ ದೃಷ್ಟಿಯಿಂದಲೂ ಮಹತ್ವ ಪಡೆದಿದೆ ಎಂದು ವಿಶ್ಲೇಷಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.