ಲಿಂಗಸುಗೂರು: ‘ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಆರು ತಿಂಗಳಲ್ಲಿ ಅನುಷ್ಠಾನಗೊಳಿಸದಿದ್ದರೆ ರಾಯಚೂರಿನಿಂದ ಬೆಂಗಳೂರು ವಿಧಾನಸೌಧದತ್ತ ಪಾದಯಾತ್ರೆ ನಡೆಸಲಾಗುವುದು’ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಅಂಬಣ್ಣ ಆರೋಲಿಕರ್ ಎಚ್ಚರಿಸಿದರು.
ಗುರುವಾರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿ, ‘ಆಡಳಿತಕ್ಕೆ ಬಂದಿರುವ ಸರ್ಕಾರಗಳು ತಮ್ಮ ನೋವು, ನಲಿವುಗಳಿಗೆ ಸ್ಪಂದಿಸುತ್ತಿಲ್ಲ. ಭಾರತೀಯ ಪ್ರಜೆಗಳಲ್ಲದ ಬಾಂಗ್ಲಾ ನಿವಾಸಿಗಳಿಗೆ ಮೀಸಲಾತಿ ಘೋಷಣೆ. ಆದರೆ, ಎರಡು ದಶಕಗಳ ಹೋರಾಟ ಮಾಡಿದ ತಮಗೆ ಆಯೋಗ ರಚನೆಗೆ 9ವರ್ಷ, ಅಧ್ಯಯನಕ್ಕೆ 7ವರ್ಷ, ಅನುಷ್ಠಾನಕ್ಕೆ ಇನ್ನೆಷ್ಟು ವರ್ಷ’ ಎಂದು ಪ್ರಶ್ನಿಸಿದರು.
ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎಚ್. ಹನುಮಂತಪ್ಪ ಮಾತನಾಡಿ, ‘1976ರಲ್ಲಿ ದೇವರಾಜು ಅರಸು ಸರ್ಕಾರ ಸ್ಪೃಶ್ಯ ಪಟ್ಟಿಯಲ್ಲಿರುವ ಬೋವಿ, ಬಂಜಾರ, ಭಜಂತ್ರಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿದರು. ಸಿದ್ದರಾಮಯ್ಯ ಸರ್ಕಾರ ಬಾಂಗ್ಲಾ ನಿವಾಸಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡುವ ಮೂಲಕ ಮತಬ್ಯಾಂಕ್ ರಾಜಕಾರಣ ನಡೆಸುತ್ತಿದೆ’ ಎಂದು ಆರೋಪಿಸಿದರು.
ಮುಖಂಡರಾದ ಹನುಮಂತಪ್ಪ ವೆಂಕಟಾಪುರ, ಎಂ. ವಿರೂಪಾಕ್ಷಿ, ಕಿರಿಲಿಂಗಪ್ಪ, ಶೇಖರಪ್ಪ ಗಿಣಿವಾರ, ರವೀಂದ್ರ ಹೊಸಮನಿ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅವಧಿಯಲ್ಲಿ ಸದಾಶಿವ ಆಯೋಗ ಅನುಷ್ಠಾನಗೊಳಿಸಬೇಕು. ಇಲ್ಲದಿದ್ದರೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ’ ಎಂದರು.
ಸಮಿತಿ ಮುಖಂಡರಾದ ಹನುಮಂತಪ್ಪ ಕುಣಿಕೆಲ್ಲೂರು, ಉಮೇಶ ಹುನಕುಂಟಿ, ಬಸವರಾಜ ಕುಣಿಕೆಲ್ಲೂರು, ಹುಲಗಪ್ಪ ಕೆಸರಟ್ಟಿ, ಯಂಕಣ್ಣ ಚಿತ್ತಾಪುರ, ಮಹಾದೇವಪ್ಪ ಪರಾಂಪುರ, ಲಕ್ಕಪ್ಪ ನಾಗರಹಾಳ, ರವೀಂದ್ರ ಜಾಲ್ದಾರ್, ಅಬ್ರಾಹಂ, ವೆಂಕಟೇಶ, ದಾನಪ್ಪ, ಹಾಜಪ್ಪ, ರಮೇಶ, ನಾಗರಾಜ, ದೇವಪ್ಪ, ಗುಂಡಪ್ಪ, ಬಾಳಮ್ಮ, ಹೊಳಿಯಮ್ಮ, ಲಲಿತಾ, ಪಾರ್ವತಮ್ಮ, ಫಕಿರಮ್ಮ ಇದ್ದರು.
* *
ಸದಾಶಿವ ಆಯೋಗ ವರದಿ ಜಾರಿ ಮಾಡದ ಸಿದ್ದರಾಮಯ್ಯ ಸರ್ಕಾರ ಬಾಂಗ್ಲಾ ನಿವಾಸಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡಿ ಮತಬ್ಯಾಂಕ್ ರಾಜಕಾರಣ ನಡೆಸುತ್ತಿದೆ
ಎಚ್. ಹನುಮಂತಪ್ಪ, ಅಧ್ಯಕ್ಷ,
ಮಾದಿಗ ಹೋರಾಟ ಸಮಿತಿ ರಾಜ್ಯ ಘಟಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.