ಕೋಲಾರ: ನಗರದಲ್ಲಿ ಕಳಪೆ ಗುಣಮಟ್ಟದ ನೀರನ್ನು ಕ್ಯಾನ್ಗಳಿಗೆ ತುಂಬಿಸಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ನಿಯಂತ್ರಣ ಘಟಕದ ಅಧಿಕಾರಿಗಳು ಶುಕ್ರವಾರ ದಿಢೀರ್ ದಾಳಿ ನಡೆಸಿ ನೀರು ವಶಪಡಿಸಿಕೊಂಡರು.
ದೊಡ್ಡಪೇಟೆ, ಎಂ.ಜಿ.ರಸ್ತೆ, ಬ್ರಾಹ್ಮಣರ ಬೀದಿ, ಎಂ.ಬಿ.ರಸ್ತೆಯಲ್ಲಿನ ಅಂಗಡಿಗಳಲ್ಲಿ ಗುಣಮಟ್ಟದಿಂದ ಕೊಡಿರದ ನೀರನ್ನು ಕ್ಯಾನ್ಗಳಿಗೆ ತುಂಬಿಸಿ ಮಾರಾಟ ಮಾಡಲಾಗುತ್ತಿತ್ತು. ಈ ನೀರು ಕುಡಿದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದ್ದ ಬಗ್ಗೆ ಸಾಕಷ್ಟು ಘಟಕಕ್ಕೆ ಸಾಕಷ್ಟು ದೂರು ಬಂದಿದ್ದವು.
ಈ ದೂರು ಆಧರಿಸಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಿಜಯಕುಮಾರಿ ನೇತೃತ್ವದಲ್ಲಿ ಅಂಗಡಿಗಳ ಮೇಲೆ ಬೆಳಿಗ್ಗೆ ದಾಳಿ ನಡೆಸಿದ ಘಟಕದ ಅಧಿಕಾರಿಗಳು 150ಕ್ಕೂ ಹೆಚ್ಚು ಕ್ಯಾನ್ ನೀರು ವಶಪಡಿಸಿಕೊಂಡರು.
‘ನಗರದ ಕೆಲ ಅಂಗಡಿಗಳಲ್ಲಿ ಕ್ಯಾನ್ಗಳಿಗೆ ಕಳಪೆ ನೀರು ತುಂಬಿಸಿ ಐಎಸ್ಐ ಗುರುತು ಇಲ್ಲದೆ ಮಾರಾಟ ಮಾಡಲಾಗುತ್ತಿತ್ತು. ಈ ಮಾಹಿತಿ ಆಧರಿಸಿ ಅಂಗಡಿಗಳ ಮೇಲೆ ದಾಳಿ ನಡೆಸಿ, ಮಾಲೀಕರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಯಿತು’ ಎಂದು ಡಾ. ವಿಜಯಕುಮಾರಿ ‘ಪ್ರಜಾವಾಣಿ’ಗೆ ತಿಳಿಸಿದರು. ಆರೋಗ್ಯಾಧಿಕಾರಿಗಳಾದ ಕೆ. ವೆಂಕಟರಾಜು, ನಾಗರಾಜ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.