ಧರ್ಮಪುರ: ಸಮೀಪದ ಕೃಷ್ಣಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಗೋಡೆ ಕುಸಿದು ಸುಮಾರು ತಿಂಗಳುಗಳೇ ಕಳೆದಿವೆ. ಇದರ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 60 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ನಾಲ್ವರು ಶಿಕ್ಷಕರಿದ್ದು, ವಿಶಾಲವಾದ ಮೈದಾನವಿದೆ. ಆದರೆ, ಹಳೆಯ ಶಾಲಾ ಕೊಠಡಿಯ ಗೋಡೆ ಕುಸಿದಿದೆ.
ಇದು ಯಾವಾಗ ಬೇಕಾದರೂ ಸಂಪೂರ್ಣ ಕುಸಿಯುವ ಆತಂಕ ಎದುರಾಗಿದೆ. ಇದಕ್ಕೆ ಹೊಂದಿಕೊಂಡಂತೆ ಅಂಗನವಾಡಿ ಕೇಂದ್ರದ ಕೊಠಡಿಯೂ ಇದೆ ಎಂದು ಗ್ರಾಮಸ್ಥ ಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ.
ಕಡ್ಡಾಯ ಶಿಕ್ಷಣ ಕಾಯ್ದೆಗೆ ಪೂರಕವಾದ ವಾತಾವರಣವನ್ನು ಉಂಟು ಮಾಡಬೇಕಾದ ಜವಾಬ್ದಾರಿ ಕೂಡ ಸರ್ಕಾರದ ಮೇಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.