ಶನಿವಾರಸಂತೆ: ಮಾರ್ಗಸೂಚಿ ಫಲಕ ಅಳವಡಿಕೆ ವಿಷಯದಲ್ಲಿ ಶನಿವಾರಸಂತೆ ಗ್ರಾಮಪಂಚಾಯಿತಿ ಆಡಳಿತ ಮಂಡಳಿ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಆ ಪಂಚಾಯಿತಿಗೆ ನೀಡಿರುವ ಎಲ್ಲ ಸೌಲಭ್ಯಗಳನ್ನು ಸ್ಥಗಿತಗೊಳಿಸಲು ಗ್ರಾಮಸಭೆಯಲ್ಲಿ ನಿರ್ಧರಿಸಲಾಯಿತು.
ಚಿಕ್ಕಕೊಳತ್ತೂರು ಗ್ರಾಮದ ಬಸವೇಶ್ವರ ನಗರಕ್ಕೆ ಮಾರ್ಗಸೂಚಿ ಫಲಕ ಅಳವಡಿಸಿರುವ ಬಗ್ಗೆ ಶನಿವಾರಸಂತೆ ಗ್ರಾಮ ಪಂಚಾಯಿತಿ ತಳೆದಿರುವ ನಿಲುವಿನ ಬಗ್ಗೆ ದುಂಡಳ್ಳಿ ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
ಸ್ಪಂದಿಸದಿದ್ದರೆ ಶನಿವಾರಸಂತೆ ಗ್ರಾ.ಪಂ.ಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಅಳವಡಿಸಲಾಗಿರುವ 200 ನಲ್ಲಿಗಳನ್ನು ಹಾಗೂ ನೀಡಲಾದ ಇತರೆ ಸೌಲಭ್ಯಗಳನ್ನೂ ಸ್ಥಗಿತಗೊಳಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
‘ಸಾರ್ವಜನಿಕರಿಗೆ ರಸ್ತೆ ಗುರುತಿಸಲು ಸಹಾಯವಾಗಲಿ ಎಂಬ ಉದ್ದೇಶದಿಂದ ಮಾರ್ಗಸೂಚಿ ನಾಮಫಲಕ ಅಳವಡಿಸ ಲಾಗುವುದೇ ಹೊರತು ಯಾರಿಗೂ ತೊಂದರೆ ಕೊಡುವ ದುರುದ್ಧೇಶದಿಂದಲ್ಲ’ ಎಂದು ದುಂಡಳ್ಳಿ ಗ್ರಾ. ಪಂ. ಅಧ್ಯಕ್ಷ ಸಿ.ಜೆ.ಗಿರೀಶ್ ಹೇಳಿದರು.
2017–18ನೇ ಸಾಲಿನಲ್ಲಿ ಬಸವ ವಸತಿ ಯೋಜನೆಯಡಿ ಹೊಸದಾಗಿ 26 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಸುಳುಗಳಲೆ ಕಾಲೊನಿಯಲ್ಲಿ ಖಾಲಿ ನಿವೇಶನದಲ್ಲಿ ಕಸ ಹಾಕುತ್ತಿರು ವುದರಿಂದ ಅಕ್ಕಪಕ್ಕದವರಿಗೆ ತೊಂದರೆ ಯಾಗುತ್ತಿರುವ ಬಗ್ಗೆ ಚರ್ಚಿಸಲಾಯಿತು.
ಕಸ ಹಾಕುತ್ತಿರುವವರಿಗೆ ನೋಟಿಸ್ ನೀಡುವ ಬಗ್ಗೆ ಹಾಗೂ ಸಾರ್ವಜನಿಕ ಹಿಂದೂ ಸ್ಮಶಾನಕ್ಕೆ ವಿದ್ಯುತ್ ಸಂಪರ್ಕ ನೀಡಲು ನಿರಾಪೇಕ್ಷಣಾ ಪತ್ರ ನೀಡಲು ತೀರ್ಮಾನಿಸಲಾಯಿತು.
ಪೊನ್ನಂಪೇಟೆಯಲ್ಲಿರುವ ಕಸ ವಿಲೇವಾರಿ ಘಟಕಕ್ಕೆ ಪಂಚಾಯಿತಿ ಆಡಳಿತ ಮಂಡಳಿ ಪ್ರವಾಸ ಕೈಗೊಂಡು ಅಧ್ಯಯನ ಮಾಡಿ, ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗ ಗುರುತಿಸಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ತೀರ್ಮಾನಿಸಲಾಯಿತು.
ಉಪಾಧ್ಯಕ್ಷೆ ರೂಪಾ, ಸದಸ್ಯರಾದ ಎನ್.ಕೆ.ಸುಮತಿ, ನೇತ್ರಾವತಿ, ಮನು ಹರೀಶ್, ಬಿ.ಎಂ.ಪಾರ್ವತಿ, ಕಮಲಮ್ಮ, ಬಿಂದಮ್ಮ, ಎಂ.ಆರ್. ರಕ್ಷಿತ್, ಎಂ.ಆರ್. ಸಂದೇಶ್, ಎಂ.ಸಿ.ಹೂವಣ್ಣ, ಎಸ್.ಸಿ. ಸಂತೋಷ್, ಪಿಡಿಒ ವೇಣುಗೋಪಾಲ್, ಲೆಕ್ಕಾಧಿಕಾರಿ ಎಂ.ಎನ್.ದೇವರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.